ತಾಂಬಾ: ಸಂಸ್ಕೃತಿ, ಸಂಪ್ರದಾಯ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುವ ಜಾನಪದ ಕಲೆ ಉಳಿಯಬೇಕಾದರೆ ಕಲಾವಿದರನ್ನು ಮೇಲೆತ್ತುವ ಕೆಲಸವಾಗಬೇಕು. ಇಲ್ಲದಿದ್ದರೇ ನಿಧಾನವಾಗಿ ಜಾನಪದ ನಶಿಸಿ ಹೋಗುತ್ತದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಗ್ರಾಮದ ವಿರಕ್ತಮಠದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಉದ್ಘಾಟಿಸಿ ಮಾತನಡಿದ ಅವರು, ದೂರದರ್ಶನ, ಚಲನಚಿತ್ರ ಅಬ್ಬರದಲ್ಲಿ ಗ್ರಾಮೀಣ ಸೊಗಡಿನ ಪ್ರತಿಬಿಂಬವಾಗಿದ್ದ ಜಾನಪದ ಕಲೆ ಅಳವಿನ ಅಂಚಿನಲ್ಲಿರುವುದು ವಿಷಾದನೀಯ ಎಂದರು.
ಬಂಥನಾಳ ವೃಷಭಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ನಶಿಸಿ ಹೋಗುತ್ತಿರುವ ಜಾನಪದ ಕಲೆ ಮತ್ತು ಜಾನಪದ ಕಲಾವಿದರನ್ನು ಉಳಿಸಿ ಬೆಳೆಸುವತ್ತ ಸರ್ಕಾರ ಮತ್ತು ಸಂಘಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈಗಾಗಲೇ ಅನೇಕ ಗ್ರಾಮೀಣ ಕಲೆಗಳು ಹಾಗೂ ಕ್ರೀಡೆಗಳು ಕಣ್ಮರೆಯಾಗಲು ದೂರದರ್ಶನದಲ್ಲಿ ಗ್ರಾಮೀಣರ ಜಾನಪದ ಸೋಗಡಿನ ಕಲೆ, ಅಡುಗೆ ಕುರಿತಾದ ಪ್ರಸಾರ ಕಾಣದಿರುವುದು ಕಾರಣ ಎಂದು ಹೇಳಿದರು.
ಇಳಕಲ್ ಅನ್ನದಾನ ಸ್ವಾಮೀಜಿ, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಕಾಶ ಮುಂಜಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಶರಣಪ್ಪ ಜಾಲವಾದಿ, ವಿಠ್ಠಲ ಮೂಲಿಮನಿ, ಸಂಜೀವ ಗೊರನಾಳ, ಗುರಸಂಗಪ್ಪ ಬಾಗಲಕೋಟಿ, ಅಪ್ಪಾಸಬ ಅವಟಿ, ಮಹಾಂತೇಶ ಮಾಶ್ಯಳ, ರಾಜಶೇಖರ ಗಂಗನಳ್ಳಿ, ತಿಪ್ಪಣ್ಣ ಮಾದರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.