ADVERTISEMENT

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ

ಸಿಂದಗಿ ತಾಲ್ಲೂಕಿನ ಬಳಗಾನೂರು ಗಲಭೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 10:10 IST
Last Updated 17 ಏಪ್ರಿಲ್ 2013, 10:10 IST

ವಿಜಾಪುರ: ಸಿಂದಗಿ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಆಲಮೇಲ ಠಾಣೆಯ ಪಿಎಸ್‌ಐ ಗೋಪಾಲ ಹಳ್ಳೂರ ಏಕಪಕ್ಷೀಯವಾಗಿ ವರ್ತಿಸು ತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗ್ರಾಮದ ಒಂದು ಕೋಮಿನವರು ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಅವರು, ಮನವಿ ಸಲ್ಲಿಸಿದರು.

`ಗ್ರಾಮದ ಕೇದಾರಲಿಂಗೇಶ್ವರ ಜಾತ್ರೆ ಸಂದರ್ಭದಲ್ಲಿ ಗಲಭೆ ನಡೆಯಲು ಒಂದು ಕೋಮಿನ ಕೆಲವರು ಕಾರಣ. ಕುಸ್ತಿ ಸ್ಪರ್ಧೆ ನಡೆಯುತ್ತಿದ್ದಾಗ ಊರ ಹಿರಿಯ ಮೇಲೆ ಅವರು ಕೈಮಾಡಿ ಗಲಾಟೆ ಆರಂಭಿಸಿದರು. ಈ ಸಂದರ್ಭ ದಲ್ಲಿ ನಡೆದ ಗಲಭೆಯಲ್ಲಿ ಉಭಯ ಕೋಮಿನವರಿಗೆ ಗಾಯಗಳಾಗಿವೆ' ಎಂದು ಹೇಳಿದರು.

`ಪೊಲೀಸರು ಕೇವಲ ಒಂದು ಕೋಮಿನ 23 ಜನರನ್ನು ಬಂಧಿಸಿದ್ದಾರೆ. ಊರಿನ ಜನ ಹೆದರಿ ಬೇರೆಡೆ ಹೋಗಿದ್ದು, ಆಲಮೇಲ ಪಿಎಸ್‌ಐ ಗೋಪಾಲ ಹಳ್ಳೂರ ಅವರು ಮಹಿಳೆ ಯರನ್ನು ನಿಂದಿಸುತ್ತ, ಸಿಕ್ಕಸಿಕ್ಕವರನ್ನು ಹೊಡೆಯುತ್ತ ದೌರ್ಜನ್ಯ ಎಸಗು ತ್ತಿದ್ದಾರೆ. ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್ ನಜೀರ್ ಅವರು ರಾತ್ರಿ ಮನೆ ಎದುರು ಕುಳಿತವರನ್ನು ಬೂಟುಗಾಲಿ ನಿಂದ ಒದ್ದಿದ್ದಾರೆ. ಆಲಮೇಲ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ' ಎಂದು ದೂರಿದರು.

`ಗ್ರಾಮದಲ್ಲಿ ಗೂಂಡಾಗಿರಿ ನಡೆಸಿ ರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೌರ್ಜನ್ಯ ನಡೆಸಿರುವ ಆಲಮೇಲ ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್ ಮೇಲೆ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು' ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಗ್ರಾಮಸ್ಥರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆ ಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂ ಡಿದ್ದರು.

ಶ್ರೀರಾಮ ಸೇನೆಯ ನೀಲಕಂಠ ಕಂದಗಲ್, ಮಹೇಶ ದೊಡಮನಿ, ಸತೀಶ್ ಪಾಟೀಲ, ಅಶೋಕ ಮಠ, ಸದಾಶಿವ ಅಂಗಡಿ, ರಮೇಶ ಕಟಗೂರ, ಆನಂದ ಕುಲಕರ್ಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.