ADVERTISEMENT

ತಿಕೋಟಾ ಹಳ್ಳಿಗಳಿಗೆ ನದಿ ನೀರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 5:20 IST
Last Updated 10 ಅಕ್ಟೋಬರ್ 2011, 5:20 IST

ವಿಜಾಪುರ: ತಿಕೋಟಾ ಹಾಗೂ ಈ ಭಾಗದ 23 ಹಳ್ಳಿಗಳಿಗೆ ನದಿ ಮೂಲದಿಂದ ಕುಡಿಯುವ ನೀರು ಪೂರೈಸಲು ಬಹು ಹಳ್ಳಿಗಳ ಕುಡಿಯುವ ನೀರಿನ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.

ತಿಕೋಟಾ ಗ್ರಾಮದಲ್ಲಿ ರೂ. 72 ಲಕ್ಷ ವೆಚ್ಚದ ಕುಡಿಯುವ ನೀರು ಪೂರೈಕೆ ಯೋಜನೆ, ವಿಶೇಷ ಘಟಕ ಯೋಜನೆ ಅಡಿ ರೂ. 30ಲಕ್ಷ ವೆಚ್ಚದ ಹರಿಜನಕೇರಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿಯೇ ಎತ್ತರ ಪ್ರದೇಶವಾಗಿರುವ ತಿಕೋಟಾ ಭಾಗದಲ್ಲಿ ಮಳೆಯ ಪ್ರಮಾಣ ಸಹ ಕಡಿಮೆಯಾಗಿದ್ದು, ಸಾವಿರ ಅಡಿ ಆಳ ಕೊರೆದರೂ ನೀರು ದೊರೆಯದ ಸ್ಥಿತಿ ಇದೆ. ಈ ಕಾರಣಕ್ಕಾಗಿ ಈ ಭಾಗದ ಸುತ್ತಲಿನ ಹಳ್ಳಿಗಳಿಗೆ ನದಿ ಮೂಲದಿಂದ ನೀರು ಪೂರೈಸಲು ರೂ. 24 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿತ್ತು. ಸತತ ಒತ್ತಾಯದ ನಂತರ ಈ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ ಎಂದರು.

ಹಿರೇಮಠದ ಶಿವಬಸವ ದೇವರು, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಕೆ. ಪಾಟೀಲ, ಜಿ.ಪಂ. ಸದಸ್ಯ ತಮ್ಮಣ್ಣ ಹಂಗರಗಿ, ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಅರ್ಜುನ ರಾಠೋಡ, ಎ.ಪಿ.ಎಂ.ಸಿ. ನಿರ್ದೇಶಕಿ ಜಯಶ್ರೀ ಪಾಟೀಲ, ದೇವಾನಂದ ಅಲಗೊಂಡ, ದ್ರಾಕ್ಷಿ ಬೆಳೆಗಾರ ಸಂಘದ ಅಧ್ಯಕ್ಷ ಬಿ.ಕೆ. ಚಿನಗುಂಡಿ, ತಾ.ಪಂ. ಸದಸ್ಯ ವಿಜಯಕುಮಾರ ಎಂ. ಪಾಟೀಲ, ಗ್ರಾ.ಪಂ. ಅಧ್ಯಕ್ಷ ಸಂತೋಷ ಕೋಲಾರ, ಅಧಿಕಾರಿಗಳಾದ ವಿ.ಡಿ. ಹಲಕುಡೆ, ಎಸ್.ಕೆ. ಕೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಬಿ.ಜಿ. ವಿಭೂತಿ ಸ್ವಾಗತಿಸಿದರು. ಎಸ್.ಎಂ. ಮಂಗಸೂಳಿ ವಂದಿಸಿದರು.
ಆರೋಗ್ಯ ಶಿಬಿರ: ಶಾಸಕ ಎಂ.ಬಿ. ಪಾಟೀಲ ಜನ್ಮದಿನದ ಅಂಗವಾಗಿ ಸಿಪ್ಲಾ ಕಂಪನಿಯ ಸಹಯೋಗದಲ್ಲಿ ಇಲ್ಲಿಯ ಎ.ಪಿ.ಎಂ.ಸಿ.ಯ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರ ಉದ್ಘಾಟಿಸಿದ ಎಪಿಎಂಸಿ ಉಪಾಧ್ಯಕ್ಷ ಅರ್ಜುನ ರಾಠೋಡ, ಬಡವರಿಗೆ ಅವಶ್ಯವಿರುವ ಸೂಕ್ತ ಚಿಕಿತ್ಸೆ ಹಾಗೂ ತಪಾಸಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಾಯವಾಗುತ್ತವೆ ಎಂದರು.

ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಪ್ರಭು ಪಾಟೀಲ ಮಾತನಾಡಿ, ಇಲ್ಲಿ ತಪಾಸಣೆಗೊಳಗಾದ ರೋಗಿಗಳಿಗೆ ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಯನ್ನು ಬಿಎಲ್‌ಡಿಇ ಆಸ್ಪತ್ರೆಯಿಂದ ನೀಡಲಾಗುವುದು ಎಂದರು.

ಎ.ಪಿ.ಎಂ.ಸಿ. ನಿರ್ದೇಶಕ ಸುಭಾಷ ಇಂಗಳೇಶ್ವರ, ರವೀಂದ್ರ ಬಿಜ್ಜರಗಿ, ನೀಲೇಶ ಶಹಾ, ಡಾ.ಶೈಲಜಾ ಬಿದರಿ, ಡಾ.ಸುಧೀರ ಹಸರೆಡ್ಡಿ, ಡಾ.ಗುರುರಾಜ ಪಡಸಲಗಿ, ಡಾ.ಕೇಶವಮೂರ್ತಿ, ವೆಂಕಟೇಶ ಪಾಟೀಲ, ರವಿಕುಮಾರ ಜಾಧವ, ಸಂತೋಷ ಬ್ಯಾಕೋಡ, ಭರತ್ ಅಂಗಡಿ, ಶ್ರೀದೇವಿ ಶೀಲವಂತರ ಇತರರು ವೇದಿಕೆಯಲ್ಲಿದ್ದರು. 900 ಜನರ ಆರೋಗ್ಯ ತಪಾಸಣೆ ನಡೆಸಿ ಔಷಧಿ ವಿತರಿಸಲಾಯಿತು. ಎಸ್.ಎಚ್. ದೇಸಾಯಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.