ADVERTISEMENT

ದಾನಗಳಲ್ಲಿ ಮತದಾನ ಶ್ರೇಷ್ಠ: ಸಾಹಿತಿ ಕೌದಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 5:44 IST
Last Updated 3 ಏಪ್ರಿಲ್ 2013, 5:44 IST

ತಾಳಿಕೋಟಿ: ದಾನ ಮನುಷ್ಯ ಬದುಕಿನ ಉತ್ಕೃಷ್ಟ ಮೌಲ್ಯ. ದಾನದಲ್ಲಿ ವಿವಿಧ ಪ್ರಕಾರಗಳುಂಟು. ಅನ್ನದಾನ, ವಿದ್ಯಾದಾನ, ರಕ್ತದಾನ ಮುಂತಾದವುಗಳು. ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವೂ ಶ್ರೇಷ್ಠ ದಾನವಾಗಿದೆ ಎಂದು ಸಾಹಿತಿ ಪ್ರೊ. ವೀರಭದ್ರ ಕೌದಿ ಹೇಳಿದರು. ಮಂಗಳವಾರ ಸ್ಥಳೀಯ ಎಸ್.ಕೆ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ  ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ನಡೆದ `ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತದಾನದ ಮಹತ್ವ'  ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಮತದಾನ ಬಹಳ ಮೌಲಿಕವಾದುದು. ಮತದಾನದಿಂದ ಒಂದು ನಾಡಿನ, ದೇಶದ ಸಮಗ್ರ ಬದುಕನ್ನು ಬದಲಿಸಬಹುದು. ಯುವಕ, ಯುವತಿಯರು ಒಂದು ದೇಶದ ಆಧಾರ ಸ್ತಂಭಗಳು. ಪಕ್ಷ, ಜಾತಿ, ಆಮಿಷಗಳಿಗೆ ಯುವಕರು ಬಲಿಯಾಗದೇ ಸಚ್ಚಾರಿತ್ರ್ಯವಂತರಿಗೆ ತಪ್ಪದೆ ಮತದಾನ ಮಾಡಿ ಭವ್ಯ ಭಾರತದ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಲ್ಲಬೇಕು. ಜೊತೆಗೆ ಚುನಾವಣೆಗಳು ಬಂದಾಗ ಮತದಾನದಲ್ಲಿ ಭಾಗವಹಿಸಬೇಕು.

ಮತದಾನದಲ್ಲಿ ಕುಟುಂಬದ  ಪ್ರತಿ ಸದಸ್ಯರು ಭಾಗವಹಿಸುವಂತೆ ಪ್ರೇರೇಪಿಸಬೇಕು. ಉತ್ತಮ ಜನಪ್ರತಿನಿಧಿಗಳ ಆಯ್ಕೆಯಲ್ಲಿ ಪ್ರತಿ ಪ್ರಜೆಗಳ ಮತದಾನ ಮಹತ್ವದ ಪಾತ್ರವಹಿಸುತ್ತದೆ. ಇದು ಜನತೆಗೆ ದೇಶನೀಡಿರುವ ಪರಮಾಧಿಕಾರ ಎಂದರು. ಬಸಲಿಂಗಪ್ಪ ತುಂಬಗಿ, ನಿಂಗಣ್ಣ ಪೂಜಾರಿ, ಸಂಗಮೇಶ ಹೊಸಮನಿ, ಸಿದ್ಲಿಂಗ, ಗಿರಿಜಾ, ವಿಜಯಲಕ್ಷ್ಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.