ADVERTISEMENT

ದುಷ್ಕರ್ಮಿಗಳ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 5:40 IST
Last Updated 3 ಜನವರಿ 2012, 5:40 IST

ಇಂಡಿ: ವಿಜಾಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಭಾನುವಾರ ಬೆಳಗಿನ ಜಾವ ತಹಸೀಲ್ದಾರ ಕಚೇರಿಯ ಮುಂದೆ ಕೆಲವು ದುಷ್ಕರ್ಮಿಗಳು ಪಾಕಿಸ್ತಾನದ ಧ್ವಜ ಹಾರಿಸಿರುವ ಘಟನೆಯನ್ನು ಖಂಡಿಸಿ, ಇಂಡಿ ಪಟ್ಟಣದಲ್ಲಿ ನೂರಾರು ಜನ ಬಿಜೆಪಿ ಕಾರ್ಯಕರ್ತರು ಸೇರಿ ಪಟ್ಟಣದಲ್ಲಿ ಪ್ರತಿಭಟನೆ ಮಾಡಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಿಂದ ಹೊರಟ ಪ್ರತಿಭಟನೆಯು  ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ ಕಚೇರಿ ತಲುಪಿತು. ಅಲ್ಲಿ ತಹಸೀಲ್ದಾರ ಜಿ.ಎಲ್. ಮೇತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಅದಕ್ಕೂ ಮುಂಜಿತವಾಗಿ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರಾದ ಶ್ರೀಮಂತ ಬಾರೀಕಾಯಿ, ಪ್ರೊ.ಸಿದ್ಧಲಿಂಗ ಹಂಜಗಿ, ಜಿ.ಎಸ್.ಬಂಕೂರ ಮತ್ತು ಅನಿಲ ಜಮಾದಾರ ಮಾತನಾಡಿ ಸಿಂದಗಿಯಲ್ಲಿ ದುಷ್ಕರ್ಮಿಗಳು ಪಾಕಿಸ್ತಾನದ ದ್ವಜ ಹಾರಿಸಿ, ರಾಷ್ಟ್ರಕ್ಕೆ ಅವಮಾನ ಮಾಡಿದ್ದಾರೆ. ಭಾರತೀಯ ನೆಲದಲ್ಲಿ ವಾಸಿಸಿರುವ ಅವರು ಭಾರತದ ಅನ್ನ ತಿಂದು ಇಂತಹ ಹೇಯ ಕೃತ್ಯ ಮಾಡಿರುವದನ್ನು ಬಲವಾಗಿ ಖಂಡಿಸುವುದಾಗಿ ಮತ್ತು ಅವರನ್ನು ಈ ಕೂಡಲೇ ಪತ್ತೆ ಹಚ್ಚಿ ಶಿಕ್ಷಿಸಬೇಕೆಂದು ಮನವಿ ಮಾಡಿದರು.

ಈ ಪ್ರತಿಭಟನೆಯ ನೇತೃತ್ವವನ್ನು ಬುದ್ದುಗೌಡ ಪಾಟೀಲ, ಮುತ್ತು ದೇಸಾಯಿ, ಅಶೋಕಗೌಡ ಪಾಟೀಲ, ಮಲ್ಲಯ್ಯಾ ಪತ್ರಿಮಠ, ಬಸವರಾಜ ದೇವರ, ದೇವೇಂದ್ರ ಕುಂಬಾರ, ಶಿವಪ್ಪ ಬಿಲಕಾರ, ಮಲ್ಲಿಕಾರ್ಜುನ ಕಿವಡೆ, ಪಾಪು ಕಿತ್ತಲಿ, ರಾಮಸಿಂಗ್ ಕನ್ನೊಳ್ಳಿ, ಹುಚ್ಚಪ್ಪ ತಳವಾರ, ಯಾಸೀನ ಅರಬ, ಅಶೋಕಗೌಡ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಅನಿಲಗೌಡ ಬಿರಾದಾರ ಇತರರು ವಹಿಸ್ದ್ದಿದರು.

ನಾಳೆ ಇಂಡಿ ಬಂದ್
ಇಂಡಿ: ಕಳೆದ ಭಾನುವಾರ ಬೆಳಿಗ್ಗೆ ವಿಜಾಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ದುಷ್ಕರ್ಮಿಗಳು ತಹಸೀಲ್ದಾರ ಕಚೇರಿಯ ಮುಂದೆ ಪಾಕಿಸ್ತಾನದ ಧ್ವಜ ಹಾರಿಸಿರುವ ಘಟನೆಯನ್ನು ಖಂಡಿಸಿ, ಇಂಡಿ ತಾಲ್ಲೂಕಿನ ಹಿಂದೂ ಜಾಗರಣೆ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಬಸವ ಸಮಿತಿ ಇಂಡಿ, ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಮುಂತಾದ ಹಿಂದೂಪರ ಸಂಘಟನೆಗಳು ಇಂಡಿ ಬಂದ್‌ಗೆ ಕರೆ ನೀಡಿವೆ.

ಈ ಬಗ್ಗೆ ಪತ್ರಿಕಾ ಪ್ರಟಣೆಯೊಂದನ್ನು ನೀಡಿದ ಸಂಜು ಪವಾರ, ವಿಜುಗೌಡ ಪಾಟೀಲ, ಪ್ರದೀಪ ಉಟಗಿ, ರಾಘವೇಂದ್ರ ವಿಜಾಪೂರ, ಉಮೇಶ ಲಚ್ಯಾಣ, ಶ್ರೀಧರ ತಾಂಬೆ, ಅನಿಲ ಜಮಾದಾರ, ಹುಚ್ಚಪ್ಪ ತಳವಾರ, ಅದೃಶ್ಯಪ್ಪ ವಾಲಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿ ದಿನಾಂಕ 4 ರಂದು ಇಂಡಿ ಬಂದ್ ಮಾಡಿ ಪ್ರತಿಭಟಿಸಲಾಗುವುದು. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಖಂಡನೆ: ಸಿಂದಗಿಯಲ್ಲಿ ಕಿಡಿಗೇಡಿಗಳು ಪಾಕಿಸ್ತಾನದ ದ್ವಜ ಹಾರಿಸಿ, ವಿನಾಕಾರಣ ಗಲಭೆಗೆ ನಾಂದಿ ಹಾಡಿದ್ದಾರೆ. ಈ ಘಟನೆಯನ್ನು ಬಲವಾಗಿ ಖಂಡಿಸುವುದಾಗಿ ಎಪಿಜೆ ಅಬ್ದುಲ್‌ಕಲಾಂ ಸಂಘದ ಅಧ್ಯಕ್ಷ ಜಾವೀದ ಮೋಮಿನ್ ತಿಳಿಸಿದ್ದಾರೆ. ಮತ್ತು ದ್ವಜವನ್ನು ಹಾರಿಸಿದ ದುಷ್ಕರ್ಮಿಗಳನ್ನು ಈ ಕೂಡಲೇ ಪತ್ತೇಹಚ್ಚಿ ಉಗ್ರ ಶಿಕ್ಷೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಜಮೀರ್ ಬಾಗವಾನ, ಶಫೀಕ್ ಪಟೇಲ, ವಾಜೀದ್ ಇನಾಮದಾರ, ಹಮೀದ್ ಮುಲ್ಲಾ, ಮಾಜೀದ ನಾಗಠಾಣ, ಸುಭಾಸ ಬಾಬರ, ಮಹೇಶ ಬಿರಾದಾರ, ಮಹೇಶ ಬಳಮಕರ, ಚಂದ್ರಶೇಖರ ಬಸರಕೋಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.