ADVERTISEMENT

ದೇಶದ ಸ್ವಾಭಿಮಾನ ರಕ್ಷಿಸಿದ ಶಿವಾಜಿ: ಡಿ.ಸಿ.

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2014, 5:22 IST
Last Updated 20 ಫೆಬ್ರುವರಿ 2014, 5:22 IST
ವಿಜಾಪುರದಲ್ಲಿ ಜಿಲ್ಲಾ ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ನಡೆಯಿತು.
ವಿಜಾಪುರದಲ್ಲಿ ಜಿಲ್ಲಾ ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ನಡೆಯಿತು.   

ವಿಜಾಪುರ: ‘ಮಹಾತ್ಮ ಗಾಂಧಿ ಅವರು  ಬ್ರಿಟೀಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಗಳಿಸಿಕೊಟ್ಟ ಹಾಗೆ ಛತ್ರಪತಿ ಶಿವಾಜಿ ಮಹಾರಾಜರು ಮೊಘಲ್‌ರ ವಿರುದ್ಧ ಛಲದಿಂದ ಹೋರಾಟ ನಡೆಸಿ, ಭಾರತದ ಸ್ವಾಭಿಮಾನ ರಕ್ಷಿಸಿದರು. ಈ ಹೋರಾಟ ನಮ್ಮ ಆತ್ಮಶಕ್ತಿ ಹಾಗೂ ದೇಶಾಭಿಮಾನ ಹೆಚ್ಚಿಸಲು ಕಾರಣ ವಾಯಿತು’ ಎಂದು ಜಿಲ್ಲಾಧಿಕಾರಿ ರಿತ್ವಿಕ್‌ ಪಾಂಡೆ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾ ಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಇಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

‘ಭಾರತ ದೇಶದ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಪ್ರಮುಖ ಸ್ಥಾನವಿದೆ. ಶಿವಾಜಿ ಯೋಧ ನಲ್ಲ. ಸ್ವಾತಂತ್ರ್ಯ ಹೋರಾಟಗಾರ, ಸ್ವಾಭಿಮಾನಿ. ದೇಶಾಭಿಮಾನಿ’ ಎಂದರು.

ಉಪನ್ಯಾಸ ನೀಡಿದ ಇಲ್ಲಿಯ ಎಸ್‌.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ.ಸದಾಶಿವ ಪವಾರ, ‘ಶಿವಾಜಿ ಮಹಾರಾಜರು ಸರ್ವಧರ್ಮಗಳ ಬಗೆಗೆ ಮಮತೆ ಹೊಂದಿದ್ದರು. ಜನ ಕಲ್ಯಾಣಕ್ಕಾಗಿ ಅವರು ರೂಪಿಸಿದ ಕಾಯ್ದೆಗಳು ಆಧುನಿಕ ಭಾರತದ ಆಡಳಿತದಲ್ಲಿಯೂ ಪ್ರಸ್ತುತವಾಗಿವೆ’ ಎಂದು ಹೇಳಿದರು.

‘ಶಿವಾಜಿ ಅವರ ದೃಷ್ಟಿಕೋನ, ಸ್ವರಾಜ್ಯ ಸ್ಥಾಪನೆಗಾಗಿ ಅವರು ನಡೆಸಿದ ಹೋರಾಟ ಸಾರ್ವಕಾಲಿಕವಾದದ್ದು. ಮಹಾನ್ ಮಾನವತಾವಾದಿ, ರಾಷ್ಟ್ರೀಯವಾದಿ ಶಿವಾಜಿಯ ಹೆಸರು ಇತಿಹಾಸದಲ್ಲಿ ಅಜರಾಮರವಾಗಿದೆ’ ಎಂದು ಬಣ್ಣಿಸಿದರು.

ಮರಾಠಾ ಸಮಾಜದ ಮುಖಂಡ ರಾಜಾರಾಮ ಗಾಯಕವಾಡ, ಶಿವಾಜಿ ಹಿಂದೂ-ಮುಸ್ಲಿಂರನ್ನು ಸಮಾನವಾಗಿ ಕಾಣುತ್ತಿದ್ದರು ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ವೈ. ಬೆಳ್ಳುಬ್ಬಿ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ  ಬಿ.ಜಿ. ಹಿಟ್ನಳ್ಳಿ, ರಾಹುಲ್‌ ಜಾಧವ, ವಿಜಯ ಕುಮಾರ ಘಾಟಗೆ, ರಾಜೇಶ ದೇವಗಿರಿ, ಜ್ಯೋತಿರಾಮ ಪವಾರ, ಶಿವಾನಂದ ಭುಯ್ಯಾರ, ಆನಂದ ಧುಮಾಳೆ ಇತರರು ವೇದಿಕೆಯಲ್ಲಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ವಾಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನಗರಾಭಿ ವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾದೇವ ಮುರಗಿ ವಂದಿಸಿದರು.

ಇದಕ್ಕೂ ಮುನ್ನ ನಗರದ ಶಿವಾಜಿ ಚೌಕ್‌ನಲ್ಲಿ ಶಿವಾಜಿ ಮಹಾರಾಜರ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಕಂದಗಲ್ ಹನುಮಂತರಾಯ ರಂಗ ಮಂದಿರದವರೆಗೆ ನಡೆದ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಾವ್ಯಾ ದೇಸಾಯಿ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ರಿತ್ವಿಕ್ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್‌ ಹಿಲೋರಿ, ಜಿಲ್ಲಾ        ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕೆ.ಬಿ.ಶಿವಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂ ಬಾಯಿ ಮಾನಕರ ಇತರರು ಉಪಸ್ಥಿತರಿದ್ದರು.

‘ಸ್ವಾತಂತ್ರ್ಯ ಹೋರಾಟಗಾರ’
ಆಲಮಟ್ಟಿ:
ಶಿವಾಜಿ ಯೋಧನಲ್ಲ, ಸ್ವಾತಂತ್ರ್ಯ ಹೋರಾಟಗಾರ, ಸ್ವಾಭಿ ಮಾನಿ, ದೇಶಾಭಿಮಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಮಹಾತ್ಮಾ ಗಾಂಧೀಜಿಯವರು ಬ್ರಿಟಿಷರ್ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಗಳಿಸಿಕೊಟ್ಟ ಹಾಗೆ ಶಿವಾಜಿ ಮಹಾರಾಜರು ಮೊಘಲರ ವಿರುದ್ಧ ಛಲದಿಂದ ಹೋರಾಟ ನಡೆಸಿ, ಭಾರತದ ಸ್ವಾಭಿ ಮಾನವನ್ನು ರಕ್ಷಿಸಿದರು ಎಂದು ಯುವ ಮುಖಂಡ ಪ್ರಹ್ಲಾದ ಪತ್ತಾರ ಅಭಿ ಪ್ರಾಯಪಟ್ಟರು.

ನಿಡಗುಂದಿಯಲ್ಲಿ ಬುಧವಾರ ಸರ್ವಧರ್ಮೀಯರು ಆಚರಿಸಿದ ಶಿವಾಜಿ ಜಯಂತಿಯಲ್ಲಿ ಅವರು ಮಾತನಾಡಿದರು.

ಸುನಿಲ ಪವಾರ ಮಾತನಾಡಿದರು. ಶ್ರೀನಾಥ ಭೈರವಾಡಗಿ, ಶರಣು ಶಿವಣಗಿ, ಅಕ್ಷಯ ಕುಂಬಾರ, ಮರಿ ಯಪ್ಪ ಚಲವಾದಿ, ಶ್ರೀಶೈಲ ಬಡಿಗೇರ, ಸಂತೋಜ ಕಾಜಗಾರ, ಸಚೀನ ಹಡಪದ, ವಿಶ್ವನಾಥ ಹೊಳಿ, ಕಾಶೀ ನಾಥ ಪವಾರ, ಶಂಕರ ಕಲಗುಡಿ, ಮೋತಿಸಾಬ ತಳೇವಾಡ, ನವೀನ ಮಾಮನಿ, ಮಂಜುನಾಥ ತೊನಶ್ಯಾಳ, ಕಲ್ಮೇಶ ಕೋರವಾರ, ಮುತ್ತುರಾಜ ಕೂಡಗಿ, ಪ್ರಶಾಂತ ಕದಂಬ, ರಮೇಶ ಕುದರಿ, ಮುತ್ತು ಕೆಂಭಾವಿ,  ಕುಮಾರ ಕೊಣ್ಣೂರ ಮೊದಲಾದವರಿದ್ದರು.

ಕಾಯಕ್ರಮಕ್ಕೂ ಮೊದಲು ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.