ADVERTISEMENT

ನೀರಾವರಿಗೆ ಒಗ್ಗಟ್ಟಿನ ಹೋರಾಟ ಅಗತ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 9:40 IST
Last Updated 10 ಫೆಬ್ರುವರಿ 2011, 9:40 IST

ವಿಜಾಪುರ: ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೊಳಪಡಿಸಲು ಈಗ ಕಾಲ ಕೂಡಿಬಂದಿದ್ದು, ಈ ದಿಶೆಯಲ್ಲಿ ಜಿಲ್ಲೆಯ ಜನತೆ, ಜನಪ್ರತಿನಿಧಿಗಳು ತಕ್ಷಣ ಕಾರ್ಯೊನ್ಮುಖರಾಗುವ ಅಗತ್ಯವಿದೆ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು. ನಗರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ನೂತನ ಕಾಂಗ್ರೆಸ್ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ವಿವಿಧ ಏತ ನೀರಾವರಿ ಯೋಜನೆಗಳು, ಕೆರೆಗಳಿಗೆ ನೀರು ತುಂಬುವ ಎಂಟು ಪ್ಯಾಕೇಜ್ ಮತ್ತಿತರರ ಯೋಜನೆಗಳ ಮೂಲಕ ಜಿಲ್ಲೆಯನ್ನು ಸಂಪೂರ್ಣವಾಗಿ ನೀರಾವರಿಗೊಳಪಡಿಸಬೇಕಿದೆ. ಜಿಲ್ಲೆಯ ಎಲ್ಲರೂ ಒಗ್ಗೂಡಿ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಿ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡಲು ಒತ್ತಡ ತರಬೇಕಿದೆ ಎಂದರು.

‘ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬಹುಮತದಿಂದ ಆಯ್ಕೆಗೊಳಿಸಿರುವುದಕ್ಕೆ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜನತೆ ಬೆಂಬಲಿಸಿ ಆಶೀರ್ವದಿಸಿದ್ದು, ಅವರ ಅಪೇಕ್ಷೆಯಂತೆ ಎಲ್ಲ ಸದಸ್ಯರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಸಲಹೆ ಮಾಡಿದರು.

ಪಕ್ಷದ ಮುಖಂಡರಾದ ಸುಭಾಷಗೌಡ ಪಾಟೀಲ, ಸಿದ್ದಣ್ಣ ಸಕ್ರಿ, ಶ್ರೀಶೈಲ ಪಾಟೀಲ, ವಿ.ಎಸ್. ಪಾಟೀಲ ಮಾತನಾಡಿದರು. ಸಭೆಯಲ್ಲಿ ಜಿ.ಪಂ. ಸದಸ್ಯರಾದ ತಮ್ಮಣ್ಣ ಹಂಗರಗಿ, ಬಿ.ಬಿ. ಪಾಟೀಲ, ಉಮೇಶ ಕೋಳಕುರ, ದೇವಾನಂದ ಚವ್ಹಾಣ, ಪ್ರಮುಖರಾದ ಬಸವರಾಜ ದೇಸಾಯಿ, ಎಚ್.ಆರ್. ಬಿರಾದಾರ, ಬಿ.ಕೆ. ಚಿನಗುಂಡಿ, ಗದಿಗೆಪ್ಪ ಬೆಳ್ಳುಂಡಗಿ, ಅಶೋಕ ದಳವಾಯಿ,  ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.