ಚಡಚಣ: ಈ ಭಾಗದ ನಿರಾವರಿ ಯೋಜನೆಗೆ ಸುಮಾರು ₹ 500 ಕೋಟಿ ಮಂಜೂರಗೊಳಿಸುವ ಮೂಲಕ, ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಥಮಾದ್ಯತೆ ನೀಡಿದ್ದೇನೆ ಎಂದು ಶಾಸಕ ಪ್ರೊ.ರಾಜೂ ಆಲಗೂರ ಹೇಳಿದರು.
ಪಟ್ಟಣದ ಬಾಲಾಜಿ ನಗರದಲ್ಲಿ ಈಚೆಗೆ ಬೋವಿ ಸಮಾಜದ ಸಮೂದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಏತ ನೀರಾವರಿಗೆ ₹ 413 ಕೋಟಿ ಅನುದಾನ ಮಂಜೂರಾಗಿ, ಟೆಂಡರ್ ಸಹ ಕರೆಯಲಾಗಿದೆ ಎಂದು ತಿಳಿಸಿದರು.
ಪಟ್ಟಣದಲ್ಲಿನ ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಳ್ಳುವ ಮಹತ್ತರ ಉದ್ದೇಶದಿಂದ ಶಾಶ್ವತ ಕುಡಿಯುವ ನೀರು ಪುರೈಕೆ ಯೋಜನೆ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಕ್ರೀಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೂಡಲೇ ಅನುಮೋದನೆ ದೊರೆಯಲಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಜನಪರ, ಕಳಂಕರಹಿತ ಆಡಳಿತ ನೀಡಿದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಮುಖಂಡ ರಾಮ ಝಡ್ಪೇಕರ, ಲಕ್ಷ್ಮಣ ಗಾಡಿವಡ್ಡರ ಮಾತನಾಡಿದರು. ಚಡಚಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಬಾಬುಗೌಡ ಪಾಟೀಲ, ಸದಸ್ಯ ರಾಜೂ ಕೋಳಿ, ಜಟ್ಟೆಪ್ಪ ಬನಸೋಡೆ, ಪರಮಾನಂದ ಕೋಳಿ, ಮಲ್ಲು ಧೋತ್ರೆ, ಮುಖಂಡ ಚಂದು ಶಿಂಧೆ, ಮಹಾದೇವ ಬನಸೋಡೆ, ಮುರ್ತುಜಿ ನದಾಫ, ಧರ್ಮು ಬನಸೋಡೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.