ADVERTISEMENT

ಪಡಿತರ ಕಾರ್ಡ್ ವಿತರಣೆಯಲ್ಲಿ ಅನ್ಯಾಯ: ದೂರು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 4:45 IST
Last Updated 1 ಅಕ್ಟೋಬರ್ 2012, 4:45 IST

ಮುದ್ದೇಬಿಹಾಳ: ಖಾಯಂ ಪಡಿತರ ಚೀಟಿ ಫೋಟೊ ತೆಗೆಯುವ ಬಯೋಮೆಟ್ರಿಕ್ ಕೇಂದ್ರದ  ಏಜೆನ್ಸಿಯವರು ಪಡಿತರ ಕಾರ್ಡ್‌ಗೆ ಫೋಟೊ ತೆಗೆಸಿಕೊಂಡು ಬಯೋಮೆಟ್ರಿಕ್ ದಾಖಲೆ ಕೊಡಲು ಬರುವ ಪಡಿತರದಾರರ ಶೋಷಣೆ ನಡೆಸಿದ್ದು ಕೂಡಲೇ ಅವರ ಏಜೆನ್ಸಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಬಿಜೆಪಿ ಹಿರಿಯ ಮುಖಂಡ ಭೀಮರಾವ್ ಪ್ರಭಾಕರ ಕುಲಕರ್ಣಿ ಅವರು ತಹಶೀಲ್ದಾರ, ಜಿಲ್ಲಾಧಿಕಾರಿ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ  ಅಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.

ವೀರೇಶ್ ಏಜೆನ್ಸಿಯವರು ಫೋಟೊ ತೆಗೆಯುವ ವಿಷಯದಲ್ಲಿ ನಾಗರಿಕರಿಗೆ ತೊಂದರೆ ಮಾಡುತ್ತಿದ್ದಾರೆ.  ಸೆ.21 ರಂದು ಎಂಡಿಬಿ4522002250 ಸಂಖ್ಯೆಯ ತಾತ್ಕಾಲಿಕ ಪಡಿತರ ಕಾರ್ಡ್‌ಗೆ ಫೋಟೊ ತೆಗೆಸಲು ಹೋದಾಗ ಕಾರ್ಡ್‌ಸೀಜ್ ಆಗಿದೆ. ತಹಶೀಲ್ದಾರ ಕಚೇರಿಗೆ ಹೋಗಿ ಎಂದು ತಿಳಿಸಿದರು. ಅದರಂತೆ  ತಹಶೀಲ್ದಾರ್ ಕಚೇರಿಗೆ ಹೋದಾಗ  ಎಲ್ಲವೂ ಸರಿಯಾಗಿ ಇರುವುದು ಕಂಡುಬಂತು.

ಆದರೆ ಮರುದಿನ   ಏಜೆನ್ಸಿಯವರು ಈ ಸಂಖ್ಯೆಯ ಮೇಲೆ ಬೇರೆ ಹೆಸರುಗಳನ್ನು ನೋಂದಣಿ ಮಾಡ್ದ್ದಿದು ಕಂಡು ಬಂದಿತ್ತು. ಇದರಿಂದ ತಮಗೆ ಅನ್ಯಾಯ ವಾಗಿದೆ. ತಮ್ಮಂತಹ ಎಷ್ಟೋ ಜನರಿಗೆ ಅನ್ಯಾಯ ಆಗಿರುವ ಸಂಶಯ ಬಂದಿದೆ. ಬಿಜೆಪಿ ಹಿರಿಯ ಮುಖಂಡನಾಗಿರುವ ತಮಗೇ ಇಂತಹ ಅನ್ಯಾಯ ಮಾಡಿದರೆ ಇನ್ನು ಬಡಜನರ ಗತಿ ಏನು? ಎಂದು ಕುಲಕರ್ಣಿ ಅವರು ಪ್ರಶ್ನಿಸಿದ್ದಾರೆ.

ಸರ್ಕಾರದ ನಿಯಮದನ್ವಯ ಒಂದು ಕಾರ್ಡಿಗೆ ರೂ.20 ಮಾತ್ರ ಪಡೆದುಕೊಳ್ಳಬೇಕು ಎಂಬ ನಿಯಮ ಇದೆ. ಆದರೆ ಈ ಕೇಂದ್ರದವರು ಒಂದು ಕಾರ್ಡಿಗೆ ರೂ 50-100 ವರೆಗೆ ಶುಲ್ಕ ಪಡೆಯುತ್ತಾರೆ. ಕೇಂದ್ರದ ಮುಂದೆ ಶುಲ್ಕ ಮಾಹಿತಿ ಪ್ರದರ್ಶಿಸುವ ನಿಯಮ ಇದ್ದರೂ ಗಾಳಿಗೆ ತೂರಲಾಗಿದೆ ಎಂದು ದೂರಿದ್ದಾರೆ. 

ತಕ್ಷಣವೇ ನಮ್ಮ ಪಡಿತರ ಕಾರ್ಡನ್ನು ಸರಿಪಡಿಸಿಕೊಡಬೇಕು. ಹಾಗೂ ಪಡಿತರ ವಿತರಣೆಯಲ್ಲಿ ತೊಂದರೆ ಮಾಡಿದ  ಏಜನ್ಸಿಯವರಿಗೆ ನೀಡಲಾದ ಅನುಮತಿಯನ್ನು ಕೂಡಲೇ ರದ್ದುಗೊಳಿಸಬೇಕು. ಅನಕ್ಷರಸ್ಥರು, ಬಡವರು ಮತ್ತು ವಯಸ್ಸಾದವರ ಶೋಷಣೆಯನ್ನು ತಡೆಗಟ್ಟಬೇಕು. ಮುಂದೆ ಅನ್ಯಾಯ ನಡೆಯದಂತೆ ಕಠಿಣ ಕ್ರಮ ಕೈಕೊಳ್ಳಬೇಕು. ಮುಂದಿನ ಒಂದು ವಾರದಲ್ಲಿ ಕ್ರಮ ಜರುಗಿಸದಿದ್ದರೆ ಮೇಲಾಧಿಕಾರಿಗಳಿಗೆ ತಿಳಿಸ ಬೇಕಾಗುತ್ತದೆ ಎಂದು ಕುಲಕರ್ಣಿ   ಎಚ್ಚರಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.