ADVERTISEMENT

‘ಪ್ರಚಾರ ಬಯಸದೇ ಬದುಕಿದ ಹಿಪ್ಪರಗಿ ಮಾಸ್ತರ್’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 5:39 IST
Last Updated 18 ಡಿಸೆಂಬರ್ 2017, 5:39 IST
ಮುದ್ದೇಬಿಹಾಳ ತಾಲ್ಲೂಕಿನ ಢವಳಗಿಯ ಎಂ.ಬಿ.ಪಾಟೀಲ ಪ್ರೌಢಶಾಲೆಯಲ್ಲಿ ಎ.ಎಸ್.ಹಿಪ್ಪರಗಿ ಸ್ಮರಣಾರ್ಥ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ನಾಲತವಾಡದ ಉಪನ್ಯಾಸಕ ಡಾ.ಡಿ.ಆರ್.ಮಳಖೇಡ ಮಾತನಾಡಿದರು
ಮುದ್ದೇಬಿಹಾಳ ತಾಲ್ಲೂಕಿನ ಢವಳಗಿಯ ಎಂ.ಬಿ.ಪಾಟೀಲ ಪ್ರೌಢಶಾಲೆಯಲ್ಲಿ ಎ.ಎಸ್.ಹಿಪ್ಪರಗಿ ಸ್ಮರಣಾರ್ಥ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ನಾಲತವಾಡದ ಉಪನ್ಯಾಸಕ ಡಾ.ಡಿ.ಆರ್.ಮಳಖೇಡ ಮಾತನಾಡಿದರು   

ಮುದ್ದೇಬಿಹಾಳ: ನಿರಂತರ ಅಧ್ಯಯನದ ಮೂಲಕ ಕನ್ನಡ ವ್ಯಾಕರಣದಲ್ಲಿ ಅಗಾಧ ಪಾಂಡಿತ್ಯ ಪಡೆದಿದ್ದ ದಿ.ಎ.ಎಸ್.ಹಿಪ್ಪರಗಿ ಅವರು ಪ್ರದರ್ಶನದ ಬದುಕು ಬದುಕದೇ ತೆರೆ ಮರೆಯಲ್ಲಿಯೇ ಬದುಕಿದರು ಎಂದು ನಾಲತವಾಡದ ವೀರೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಡಿ.ಆರ್.ಮಳಖೇಡ ಹೇಳಿದರು.

ತಾಲ್ಲೂಕಿನ ಢವಳಗಿ ಗ್ರಾಮದ ಎಂ.ಬಿ.ಪಾಟೀಲ ಪ್ರೌಢಶಾಲೆಯ ಆವರಣದಲ್ಲಿ ದಿ.ಎ.ಎಸ್.ಹಿಪ್ಪರಗಿ ಸ್ಮರಣಾರ್ಥ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಹಿಪ್ಪರಗಿ ಅವರ ವೈಯಕ್ತಿಕ ಜೀವನ, ಸಾಧನೆ ಕುರಿತು ಅವರು ಉಪನ್ಯಾಸ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತಮ್ಮ ಜೀವನ ಆರಂಭಿಸಿದ ಹಿಪ್ಪರಗಿಯವರು, ವಿದ್ಯಾರ್ಥಿಗಳಿಗೆ ಕಲಿಸುತ್ತಲೇ, ತಾವೂ ಕಲಿಯುತ್ತಲೇ ಅಪಾರ ಜ್ಞಾನವನ್ನು ಧಾರೆ ಎರೆದರು. ಕನ್ನಡದ ಹಿರಿಯ ಸಾಹಿತಿಗಳ ಬರಹಗಳ ಮೇಲೆ ಆಳವಾದ ಅಧ್ಯಯನ ನಡೆಸಿ ಅವರು ಬರೆದ ಲೇಖನಗಳ ಮೇಲೆ ಮೂರು ಸಂಶೋಧನಾ ಗ್ರಂಥ ಬರೆಯಬಹುದು. ಬಡತನದಲ್ಲಿ ಹುಟ್ಟಿದ್ದ ಅವರು, ಶಿಕ್ಷಣದ ಮಹತ್ವ ಅರಿತು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನದ ಜೊತೆಗೆ ಮಾನವೀಯತೆಯ ಶಿಕ್ಷಣ ನೀಡಿದರು ಎಂದು ಹೇಳಿದರು.

ADVERTISEMENT

ಗಣ್ಯ ವರ್ತಕ ಸಿದ್ದನಗೌಡ ಬಿರಾದಾರ ಮಾತನಾಡಿ, ಈ ಭಾಗದಲ್ಲಿ ಶೈಕ್ಷಣಿಕ ಪ್ರಜ್ಞೆ ಮೂಡಿಸಿ, ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಕಾಗುವಂತೆ ಹಿಪ್ಪರಗಿ ಶ್ರಮಿಸಿದ್ದಾರೆ. ಅವರ ವಿದ್ವತ್ತನ್ನು ಗುರುತಿಸಿ, ಇಲ್ಲಿಗೆ ಕರೆತಂದು, ಭೂದಾನ ಮಾಡಿ ಶೈಕ್ಷಣಿಕ ಪ್ರಗತಿಗೆ ಕಾರಣರಾದ ಮಡಿಕೇಶ್ವರದ ಶ್ರೀಮಂತ ಪಾಟೀಲರ ಮೂರ್ತಿ ಪ್ರತಿಷ್ಠಾಪನೆಗೆ ತಾವು ಎಲ್ಲ ವಿಧದ ನೆರವು ನೀಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಂ.ಬಿ.ಪಾಟೀಲ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭುಗೌಡ ಪಾಟೀಲ ಮಾತನಾಡಿದರು. ಎಂ.ಎಂ.ಕೋರಿ, ಎಂ.ಎನ್.ಹೇರಲಗಿ, ಸಂಗಣ್ಣ ಹಿಪ್ಪರಗಿ, ಎಂ.ಎಂ.ಬೆಳಗಲ್ಲ, ವೆಂಕಪ್ಪಣ್ಣ ಕೊಣ್ಣೂರ, ಬಸವಂತರಾಯಗೌಡ ಬಿರಾದಾರ, ಸಿ.ಆರ್.ಬಂಗಾರಗುಂಡ, ಮಡಿವಾಳಪ್ಪಗೌಡ ಬಿರಾದಾರ, ನಾರಾಯಣ ಕಪಟಕರ, ಡಾ.ವಿ.ಡಿ.ಐಹೊಳೆ, ವಿ.ಸಿ.ನಾಗಠಾಣ, ಮ.ಗು.ಯಾದವಾಡ, ಎಸ್‌.ಬಿ.ಬಂಗಾರಿ ಉಪಸ್ಥಿತರಿದ್ದರು.

ಶ್ರದ್ಧಾ, ಶ್ರೇಯಾ, ಅನುರಾಧಾ ಸ್ವಾಗತ ಗೀತೆ ಹಾಡಿದರು. ಚಂದ್ರಶೇಖರ ನಾಗರಾಳ ಸ್ವಾಗತಿಸಿದರು. ಸಂಸ್ಥೆ ಅಧ್ಯಕ್ಷ ಎಸ್.ಎಸ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್.ಆರ್.ಸುಲ್ಪಿ ನಿರೂಪಿಸಿದರು. ಸಂಗಣ್ಣ ಹಿಪ್ಪರಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.