ADVERTISEMENT

‘ಪ್ರತ್ಯೇಕ ಧರ್ಮ ರ‍್ಯಾಲಿಗೆ ಕೈ ಜೋಡಿಸಿ’

ವಿಜಯಪುರ ತಾಲ್ಲೂಕಿನ ಲಿಂಗಾಯತ ಪ್ರಮುಖರ ಸಭೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 7:35 IST
Last Updated 6 ಡಿಸೆಂಬರ್ 2017, 7:35 IST
‘ಪ್ರತ್ಯೇಕ ಧರ್ಮ ರ‍್ಯಾಲಿಗೆ ಕೈ ಜೋಡಿಸಿ’
‘ಪ್ರತ್ಯೇಕ ಧರ್ಮ ರ‍್ಯಾಲಿಗೆ ಕೈ ಜೋಡಿಸಿ’   

ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಶತಸಿದ್ದ, ಇದಕ್ಕಾಗಿ ಎಲ್ಲ ಸಿದ್ಧತೆಗಳು ಲಿಂಗಾಯತ ಧರ್ಮ ವೇದಿಕೆಯವರು ಮಾಡಿಕೊಂಡಿದ್ದು, ಬಸವ ನಾಡಿನಲ್ಲಿ ನಡೆಯುವ ಲಿಂಗಾಯತ ಪ್ರತ್ಯೇಕ ಧರ್ಮ ರ್ಯಾಲಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದ ಫ.ಗು.ಹಳಕಟ್ಟಿ ಸಭಾ ಭವನದಲ್ಲಿ ಮಂಗಳವಾರ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಕುರಿತಂತೆ ಜರುಗಿದ ವಿಜಯಪುರ ತಾಲ್ಲೂಕಿನ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

12ನೇ ಶತಮಾನದಿಂದ 1891ರವರೆಗೆ ಲಿಂಗಾಯತ ಪ್ರತ್ಯೇಕ ಧರ್ಮವಾಗಿಯೇ ಇತ್ತು. ಕೆಲವರ ಕುತಂತ್ರದಿಂದ ನಂತರದಲ್ಲಿ ಹಿಂದು ಧರ್ಮದಲ್ಲಿ ಸೇರಿಸಿ ಶೂದ್ರ ಕೆಟಗೇರಿಯಲ್ಲಿ ಸೇರಿಸಲಾಯಿತು. ನೂರು ವರ್ಷಗಳಿಂದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ರತ್ಯೇಕ ಧರ್ಮಕ್ಕೆ ನಮ್ಮ ಹಿರಿಯರು ಒತ್ತಾಯಿಸುತ್ತಾ ಬಂದಿದ್ದಾರೆ. ಅದರಲ್ಲಿ ಬಿ.ಎಲ್.ಡಿ.ಇ.ಸಂಸ್ಥೆ ಸಂಸ್ಥಾಪಕ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ, ಆಲಮೇಲದ ದೇಶಮುಖರು ಮತ್ತು ಸಿಂಘಾಸನ ಮಾಮಲೇದಾರರು ಪ್ರಮುಖರಾಗಿದ್ದಾರೆ. ಅವರು ಮಾಡಿರುವ ಕಾರ್ಯವನ್ನು ನಾವು ಮುಂದುವರೆಸಿದ್ದೇವೆ ಎಂದರು.

ADVERTISEMENT

12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆ 21ನೇ ಶತಮಾನದಲ್ಲಿ ಸಿಗುವುದು ಖಚಿತ. ಸುಪ್ರೀಂಕೋರ್ಟ್‌ ಹೋಗಿಯಾದರೂ ನಾವು ಮಾನ್ಯತೆ ಪಡೆದೆ ಪಡೆಯುತ್ತೇವೆ. ಸ್ವತಂತ್ರ ಧರ್ಮ ಮಾನ್ಯತೆಯಿಂದ ಯುವಕರಿಗೆ ಉದ್ಯೋಗ ಅವಕಾಶಗಳು, ನೌಕರರಿಗೆ ಬಡ್ತಿಗಳು, ಸಂಘ-ಸಂಸ್ಥೆಗಳಿಗೆ ಸವಲತ್ತುಗಳು, ಮಠ ಮತ್ತು ದೇವಸ್ಥಾನಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲವಾಗುತ್ತದೆ.

ಇದನ್ನು ಅರ್ಥ ಮಾಡಿಕೊಳ್ಳದೇ ಕೆಲವರು ಲಿಂಗಾಯತ ಧರ್ಮ ಒಡೆಯುತ್ತಿದ್ದಾರೆ ಎಂದು ಟೀಕಿಸುತ್ತಿದ್ದು, ಇಂತಹವರು ಎಷ್ಟೇ ವಿರೋಧ ಮಾಡಿದರೂ ನಾವು ಹಿಂಜರಿಯುವುದಿಲ್ಲ. ನಮ್ಮ ಗುರಿ ಸ್ಪಷ್ಟವಾಗಿದೆ. ಪ್ರತ್ಯೇಕ ಧರ್ಮ ಮಾನ್ಯತೆ ನಂತರ ಈಗ ಟೀಕಿಸುವವರೂ ನಮ್ಮ ಜೊತೆ ಕೈ ಜೋಡಿಸುತ್ತಾರೆ. ಅವರ ನಂಬಿಕೆಗಳಿಗೆ ಆಚಾರ–-ವಿಚಾರಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಬಸವರಾಜ ದೇಸಾಯಿ, ಸೋಮನಾಥ ಬಾಗಲಕೋಟ, ಉಮೇಶ ಕೋಳಕೂರ, ಗೌಡಪ್ಪಗೌಡ ದೇವಾಪುರ, ವಿ.ಎಸ್.ಪಾಟೀಲ, ವಿದ್ಯಾರಾಣಿ ತುಂಗಳ, ಎಂ.ಎಸ್.ಲೋಣಿ, ಸೋಮನಾಥ ಕಳ್ಳಿಮನಿ, ಎಚ್.ಆರ್.ಬಿರಾದಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.