ವಿಜಯಪುರ: ‘ವಿಜಯಪುರದಲ್ಲಿ ಪಾಸ್ಫೋರ್ಟ್ ಸೇವಾ ಕೇಂದ್ರ ಸ್ಥಾಪಿಸಬೇಕು ಎಂಬ ಬಹು ದಿನಗಳ ಬೇಡಿಕೆ ಇದೀಗ ಈಡೇರಿದೆ’ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ತಿಳಿಸಿದರು.
ನಗರದ ಅಂಚೆ ಮುಖ್ಯ ಕಚೇರಿ ಆವರಣದಲ್ಲಿ ಶುಕ್ರವಾರ ಪಾಸ್ಪೋರ್ಟ್ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಕೇಂದ್ರ ಸ್ಥಾಪನೆಯಿಂದ ಜಿಲ್ಲೆಯ ಜನರಿಗೆ -ವಿದೇಶಕ್ಕೆ ಸಂಚರಿಸಲು ಅನುಕೂಲವಾಗಲಿದೆ’ ಎಂದರು.
‘ಮುಂದಿನ ದಿನಗಳಲ್ಲಿ ಹೆಚ್ಚಿನ ಪಾಸ್ಫೋರ್ಟ್ ಸೇವಾ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಪಾಸ್ಫೋರ್ಟ್ ಸೇವಾ ಕೇಂದ್ರದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ ಜಿಗಜಿಣಗಿ, ‘ಸೇವಾ ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ಸಕಾಲದಲ್ಲಿ ಸ್ಪಂದಿಸಿ ಸೇವೆ ನೀಡಬೇಕು’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿ ‘ಜಿಲ್ಲೆಯ ಜನರು ವಿದೇಶ ಪ್ರವಾಸ, ವ್ಯವಹಾರಕ್ಕೆ ಮತ್ತು ಇತರೆ ಯಾವುದೇ ಕಾರ್ಯಕ್ಕೆ ವಿದೇಶಕ್ಕೆ ಹೋಗಲು ಪಾಸ್ಫೋರ್ಟ್ ಅತ್ಯವಶ್ಯಕವಾಗಿದೆ. ಈ ಸೇವಾ ಕೇಂದ್ರದಿಂದ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ’ ಎಂದರು.
ಅಂಚೆ ಇಲಾಖೆ ಅಧಿಕಾರಿ ಭರತಕುಮಾರ ಮಾತನಾಡಿ ‘ಈ ಪಾಸ್ಫೋರ್ಟ್ ಸೇವಾ ಕೇಂದ್ರ 10ರಿಂದ 15 ದಿನಗಳಲ್ಲಿ ತನ್ನ ಸೇವೆ ಆರಂಭಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ’ ಮನವಿ ಮಾಡಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ. ಸುಂದರೇಶಬಾಬು, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಚಂದ್ರಶೇಖರ
ಕವಟಗಿ, ರವಿಕಾಂತ ಬಗಲಿ, ಗೋಪಾಲ ಘಟಕಾಂಬಳೆ, ವಿವೇಕಾನಂದ, ಸುರೇಶ ಬಿರಾದಾರ ಉಪಸ್ಥಿತರಿದ್ದರು.
ಅಂಚೆ ಕಚೇರಿ ಅಧಿಕಾರಿ ಕೆ.ದಿನಕರ ವಂದಿಸಿದರು. ಕೆ.ಶ್ರೀನಿಧಿ ನಿರೂಪಿಸಿದರು.
***
ಪಾಸ್ಪೋರ್ಟ್ಗಾಗಿ ತಿಂಗಳುಗಟ್ಟಲೇ ಕಾಯಬೇಕಿತ್ತು. ಇನ್ಮುಂದೆ ನಿರ್ದಿಷ್ಟ ಸಮಯದೊಳಗೆ ಮನೆಗಳಿಗೆ ಪಾಸ್ಪೋರ್ಟ್ ತಲುಪಲಿದೆ.
–ರಮೇಶ ಜಿಗಜಿಣಗಿ, ಕೇಂದ್ರ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.