ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಬೀಸಿದ ಬಿರುಗಾಳಿಗೆ ನೂರಾರು ಗಿಡ ಮರಗಳು, ವಿದ್ಯುತ್ ಕಂಬ ಉರುಳಿದಿದ್ದು, ಕೆಲ ಕಡೆ ಶೆಡ್ಗಳ ಪತ್ರೆಗಳು ಹಾರಿವೆ.
ರಾತ್ರಿ 9 ಗಂಟೆ ಸುಮಾರಿಗೆ ಜಿಲ್ಲೆಯಾದ್ಯಂತ ಆರಂಭಗೊಂಡ ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ಜನ-ಜೀವನವೇ ಅಸ್ತವ್ಯಸ್ತವಾಯಿತು. ಮನೆ ಹೊರಗಿದ್ದ ಜನರು ಗೂಡು ಸೇರಿಕೊಳ್ಳಲು ಹರಸಹಾಸಪಟ್ಟರು.
ವಿದ್ಯುತ್ ಸಂಪೂರ್ಣ ಕೈಕೊಟ್ಟಿದ್ದರಿಂದ ಇಡೀ ನಗರವೇ ಕಗ್ಗತ್ತಲಲ್ಲಿ ಮುಳುಗುವಂತಾಗಿತ್ತು. ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವ ಕಾರಣ ಅನೇಕ ಬಡಾವಣೆಗಳಲ್ಲಿ ಭಾನುವಾರ ಸಹ ವಿದ್ಯುತ್ ವ್ಯತ್ಯಯ ಉಂಟಾಯಿತು. ಹೆಸ್ಕಾಂ ಸಿಬ್ಬಂದಿ ಕಂಬಗಳ ಮರು ಜೋಡಣಾ ಕಾರ್ಯದಲ್ಲಿ ತೊಡಗಿದ್ದರು.
ರಸ್ತೆಯಲ್ಲಿ ತ್ಯಾಜ್ಯ: ನಗರದ ಐತಿಹಾಸಿಕ ಗೋಳಗುಮ್ಮಟ ಎದುರಿನ ಬೃಹತ್ ಬೇವಿನ ಮರ, ಜಿಲ್ಲಾಧಿಕಾರಿ ಕಚೇರಿ ಆವ
ರಣದಲ್ಲಿನ ಹಲ ಗಿಡಗಳು, ರಂಭಾಪೂರ ಬಡಾವಣೆಯಲ್ಲಿ ಹತ್ತಾರು ಗಿಡ-ಮರಗಳು, ಗಾಂಧಿಚೌಕ್ ಪೊಲೀಸ್ ಠಾಣೆ
ಯಲ್ಲಿನ ಬೃಹತ್ ಗಿಡಗಳು, ಇಬ್ರಾಹಿಂ ಪೂರ, ಕೀರ್ತಿನಗರ, ಬಡಿಕಮಾನ ಸೇರಿದಂತೆ ಹತ್ತಾರು ಕಡೆಗಳಲ್ಲಿ ಅಸಂಖ್ಯ ಗಿಡಮರಗಳು, ಟೊಂಗೆಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಂಭಾಗದಲ್ಲಿರುವ ವಿದ್ಯುತ್ ಕಂಬ ನೆಲಕ್ಕುರ
ಳಿವೆ. ಇದರಿಂದ ನಗರದ ಯಾವುದೇ ರಸ್ತೆ ಅಥವಾ ಬಡಾವಣೆಗಳಲ್ಲಿ ಸಂಚರಿಸಿದರೂ ನೆಲಕ್ಕುರುಳಿದ ಗಿಡಮರ, ವಿದ್ಯುತ ಕಂಬ, ರಸ್ತೆಯಲ್ಲಿ ತ್ಯಾಜ್ಯವಸ್ತುಗಳು ಗೋಚರಿಸುತ್ತಿದ್ದವು.
ಮನೆಗಳಿಗೆ ನೀರು: ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯ ವಸತಿ ಗೃಹದ ಶೀಟ್ಗಳು ಹಾರಿ ಹೋಗಿವೆ. ಕಸ್ತೂರಿ ಕಾಲೊನಿ, ಜೋರಾಪೂರ ಪೇಟ ಸೇರಿದಂತೆ ವಿವಿಧ ಸ್ಲಂ ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ರಾತ್ರಿಯಿಡಿ ಅಲ್ಲಿನ ನಿವಾಸಿಗಳು ಗೋಳಾಡುವಂತಾಯಿತು.
ಸ್ಲಂ ನಿವಾಸಿಗಳ ಗೋಳು: ‘ಪ್ರತಿ ಬಾರಿಯೂ ಮಳೆ ಬಂದಾಗ ನಮಗೆ ಈ ಪರಿಸ್ಥಿತಿ ಎದುರಾಗುತ್ತಲೇ ಐತಿ. ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಹಲವು ಬಾರಿ ಸಂಬಂಧಿಸಿದವರಿಗೆ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಜೋರಾದ ಮಳೆ ಬಂದಾಗ ನೀರು ಹೊರಹಾಕುವುದೇ ನಮಗೆ ದೊಡ್ಡ ಕೆಲಸವಾಗುತ್ತದೆ. ನಮ್ಮ ಗೋಳು ಯಾರಿಗೆ ಹೇಳಬೇಕು’ ಎಂದು ಸ್ಲಂ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.