ಇಂಡಿ: ತಾಲ್ಲೂಕಿನ ಸುಮಾರು 60 ಗ್ರಾಮಗಳಲ್ಲಿ ಸೋಮವಾರ ಸುರಿದ ಅಕಾಲಿಕ ಆಲಿಕಲ್ಲು ಮಳೆ ಬಿದ್ದ ಪರಿಣಾಮ ರೈತರಿಗೆ ಅಪಾರ ಹಾನಿಯಾಗಿದೆ. ಹಾನಿಗೊಳಗಾದ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸರಕಾರಕ್ಕೆ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿತು.
ಆಲಿಕಲ್ಲು ಮಳೆಯಿಂದ ತಾಲ್ಲೂಕಿನ ದ್ರಾಕ್ಷಿ, ಲಿಂಬೆ, ದಾಳಿಂಬೆ, ಬಾಳಿ, ಪಪಾಯಿ, ಕಲ್ಲಂಗಡಿ ಬೆಳೆಗಳಲ್ಲದೇ ಜೋಳ, ಕಡಲೆ, ಜವಿ, ಕಬ್ಬು, ಗೋಧಿ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಬರುವ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು, ಇಂಡಿ ತಾಲ್ಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿದ್ದು, ಇಲ್ಲಿಯವರೆಗೆ ಯಾವುದೇ ಬರಗಾಲ ಕಾಮಗಾರಿ ಆರಂಭಿಸಿಲ್ಲ ಎಂದಿರುವ ಸಂಘಗಳು ಕೂಡಲೇ ಬರಗಾಲ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿವೆ.
ಕೆ.ಜಿ.ಪಾಟೀಲ, ಪಾಂಡು ಪ್ಯಾಟಿ, ಎಸ್.ಎಸ್.ಹೂಗಾರ, ಎ.ಕೆ.ದುದಗಿ, ಕೆ.ಎ.ತೆನ್ನಳ್ಳಿ, ಕೆ.ವಿ.ಶಿರನಾಳ, ಪ್ರಕಾಶ ಅಲಗುಂಟೆ, ಶಿವಪುತ್ರ ಗುಂಜಟಗಿ, ರಾಯಪ್ಪ ಅಚ್ಚೆಗಾಂವ, ಭೀಮಾಶಂಕರ ಜಂಗಲಗಿ, ಶರಣಪ್ಪ ಲಾಳಸೇರಿ, ಉದಯಕುಮಾರ ಜೀರಗೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.