ADVERTISEMENT

ಮದುವೆಗೆ ಬಂದವರಿಗೆ ಸಸಿ ಕೊಡುಗೆ

ವನ ಮಹೋತ್ಸವ ಯಶಸ್ಸಿಗೆ ವಧು–ವರರಿಂದ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 9:12 IST
Last Updated 19 ಜೂನ್ 2018, 9:12 IST
ನಾಲತವಾಡ ಸ್ಥಳೀಯ ಹಳ್ಳೂರ ಫಂಕ್ಷನ್ ಪ್ಯಾಲೆಸ್‌ನಲ್ಲಿ ವಧು–ವರರು ಮದುವೆಗೆ ಬಂದವರಿಗೆ ಸಸಿಗಳನ್ನು ವಿತರಿಸಿದರು
ನಾಲತವಾಡ ಸ್ಥಳೀಯ ಹಳ್ಳೂರ ಫಂಕ್ಷನ್ ಪ್ಯಾಲೆಸ್‌ನಲ್ಲಿ ವಧು–ವರರು ಮದುವೆಗೆ ಬಂದವರಿಗೆ ಸಸಿಗಳನ್ನು ವಿತರಿಸಿದರು   

ನಾಲತವಾಡ: ಸ್ಥಳೀಯ ಹಳ್ಳೂರ ಫಂಕ್ಷನ್ ಪ್ಯಾಲೆಸ್‌ನಲ್ಲಿ ಸೋಮವಾರ ನಡೆದ ಮದುವೆಯಲ್ಲಿ, ನವ ದಂಪತಿ ಸುಮಾರು 500ಕ್ಕೂ ಹೆಚ್ಚು ವಿವಿಧ ಬಗೆಯ ಸಸಿಗಳನ್ನು ಮದುವೆಗೆ ಬಂದವರಿಗೆ ವಿತರಿಸಿದರು.

ಸ್ಥಳಿಯ ಗಂಗಪ್ಪ ಜಾವಳಗೇರಿ ಎಂಬುವರ ಪುತ್ರ ಸಂಗಮೇಶ ಜಾವಳಗೇರಿ ಹಾಗೂ ರೇಣುಕಾ ದಂಪತಿ ತಮ್ಮನ್ನು ಶುಭ ಹಾರೈಸಲು ಬಂದವರಿಗೆ ಸಸಿಗಳನ್ನು ನೀಡಿದರು. ‘ಸಸಿ ನೆಟ್ಟು ನಾಡಿನಲ್ಲಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆಯಬೇಕು’ ಎಂದು ವಿನಂತಿಸಿ
ಕೊಂಡರು.

ಸಾಮಾನ್ಯರಿಗೆ ವಿತರಣೆ: ಮುಗ್ದ ಜನರಲ್ಲಿ ಸಸಿ ನೆಟ್ಟು ಮರವಾಗಿ ಬೆಳೆಸಿ ಪೋಷಿಸುವ ಜೊತೆಗೆ ಬೆಳೆದ ಮರವು ಉತ್ತಮ ಪರಿಸರ ಬೀರುವ ಕುರಿತು ಅವರಲ್ಲಿ ಜಾಗೃತಿ ಮೂಡಲಿ ಎನ್ನುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಜಾವಳಗೇರಿ ಕುಟುಂಬ ತಿಳಿಸಿದೆ.

ADVERTISEMENT

‘ಮುಂದಿನ ದಿನಗಳಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳೇ ಇರಲಿ ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬರೂ ಒಂದೊಂದು ಸಸಿಗಳನ್ನು ಪಡೆದು ಉತ್ತಮ ಸ್ಥಳಗಳಲ್ಲಿ ಬೆಳೆಸಿ ಪೋಷಿಸಬೇಕು. ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಭೂಮಂಡಲದ ಪ್ರತಿಯೊಬ್ಬ ಮಾನವ ಜೀವಿಯೂ ತಮ್ಮ ಕುಟುಂಬ ಸದಸ್ಯರ ಹೆಸರಲ್ಲಿ ಸಸಿ ನೆಟ್ಟು ಬೆಳೆಸಬೇಕು. ಆಗ ಮಾತ್ರ ನಮ್ಮ ಸುತ್ತಲಿನ ಪರಿಸರ ಮಲೆನಾಡು ಆಗಿ ಪರಿವರ್ತನೆ ಹೊಂದಲು ಸಾಧ್ಯ’ ಎಂದು ಅಮರಪ್ಪ ಭಾವಿಕಟ್ಟಿಯ ರಾಜಶೇಖರ ಜಾವೂರ ಹೆಳಿದರು

ಆಸೆ ಈಡೇರಿದೆ...

‘ನನ್ನ ಮದುವೆ ದಿನ ಸುಮಾರು 500ಕ್ಕೂ ಹೆಚ್ಚು ಸಸಿಗಳನ್ನು ವಿತರಣೆ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆ ಆಸೆ ಈಡೇರಿದೆ. ಎಲ್ಲರೂ ನನ್ನಂತೆ ಚಿಂತನೆ ಮಾಡಿದರೆ ಎಲ್ಲೆಂದರಲ್ಲಿ ಹಸಿರು ಗೋಚರಿಸುತ್ತದೆ ಎಂದು ವರ ಸಂಗಮೇಶ ಜಾವಳಗೇರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.