ತಾಳಿಕೋಟೆ: ಪಟ್ಟಣ ಹಾಗೂ ಡೋಣಿ ನದಿ ಜಲಾನಯನ ಪ್ರದೇಶದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಡೋಣಿ ನದಿಗೆ ಶುಕ್ರವಾರ ಬೆಳಿಗ್ಗೆಯಿಂದಲೇ ಪ್ರವಾಹ ಬಂದಿತ್ತು.
ಹಡಗಿನಾಳ ರಸ್ತೆಯಲ್ಲಿರುವ ನೆಲಮಟ್ಟದ ಸೇತುವೆ ಮೇಲೆ ನಾಲ್ಕು ಅಡಿಗೂ ಹೆಚ್ಚಿನ ಪ್ರವಾಹವಿದ್ದುದರಿಂದ ಇಡೀ ದಿನ ಸಂಚಾರಕ್ಕೆ ವ್ಯತ್ಯಯವಾಯಿತು. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಮುದ್ದೇಬಿಹಾಳ ನಾಲತವಾಡ ಕಲ್ಲದೇವನಹಳ್ಳಿ, ಮೂಕಿಹಾಳ, ಶಿವಪುರ ಸೇರಿದಂತೆ ಅನೇಕ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿತು. ಇದರಿಂದಾಗಿ ಎಲ್ಲ ವಾಹನಗಳು ಮಿಣಜಗಿ ಮಾರ್ಗದ ಮೂಲಕ ಸಂಚರಿಸುವಂತಾಯಿತು.
ಸೇತುವೆ ಎತ್ತರಕ್ಕೆ ಹೆಚ್ಚಿದ ಬೇಡಿಕೆ: ಮಳೆಗಾಲದಲ್ಲಿ ಪದೇ ಪದೇ ಈ ಮಾರ್ಗ ಪ್ರವಾಹದಿಂದ ಮುಚ್ಚಿ ಹೋಗುತ್ತಿರುವುದರಿಂದ ಈ ಸೇತುವೆಯನ್ನು ಎತ್ತರ ಮಾಡಬೇಕು ಎಂದು ಜನತೆ ಆಗ್ರಹಿಸಿದ್ದಾರೆ.
ದುರಸ್ತಿಯಾಗದ ಮುಖ್ಯ ಸೇತುವೆ: ರಾಜ್ಯ ಹೆದ್ದಾರಿಯಲ್ಲಿರುವ ಮುಖ್ಯ ಸೇತುವೆ ಶಿಥಿಗೊಂಡಿದ್ದು ಅದರ ದುರಸ್ತಿ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ಪ್ರಸ್ತುತ ಬ್ರಿಟಿಷ್ ಕಾಲದ ಸೇತುವೆ ಮೇಲೆ ನಿಧಾನಕ್ಕೆ ಸಂಚಾರ ನಡೆದಿದೆ.
ಈ ಸೇತುವೆಗೂ ಪ್ರವಾಹದ ನೀರಿಗೂ ಕೇವಲ ಎರಡು ಅಡಿ ಮಾತ್ರ ಅಂತರವಿದೆ. ಪ್ರವಾಹ ಹೆಚ್ಚಾದರೆ ಈ ಮಾರ್ಗವೂ ಮುಚ್ಚಿಹೋಗುವ ಭೀತಿಯಲ್ಲಿ ಜನತೆ ಇದ್ದಾರೆ. ಪ್ರವಾಹ ಹೆಚ್ಚಿದರೆ ವಿಜಾಪುರ ಹುಬ್ಬಳ್ಳಿ, ಮುದ್ದೇಬಿಹಾಳಗಳಿಗೆ ಹೋಗುವ ಎಲ್ಲ ರಸ್ತೆಗಳೂ ಬಂದ್ ಆಗುತ್ತವೆ. ಜೂನ್ ತಿಂಗಳಲ್ಲೇ ಮುಖ್ಯ ಸೇತುವೆ ದುರಸ್ತಿ ಕಾರ್ಯ ಆರಂಭಗೊಂಡಿದ್ದು 15 ದಿನಗಳಲ್ಲಿ ಸೇತುವೆ ಕಾರ್ಯ ಮುಗಿಯಬಹುದು ಎಂಬ ನಿರೀಕ್ಷೆಯಲ್ಲಿ ಜನತೆಯದ್ದಾಗಿತ್ತು.
ಲೋಕೋಪಯೋಗಿ ಇಲಾಖೆ ಸಹ ದುರಸ್ತಿ ಪ್ರಾರಂಭವಾದ ತಿಂಗಳಲ್ಲಿ ಸೇತುವೆ ಸಂಚಾರಕ್ಕೆ ಮುಕ್ತವಾಗುತ್ತದೆ ಎಂದು ತಿಳಿಸಿದ್ದರು. ಆದರೆ ಸೆಪ್ಟೆಂಬರ್ ಬಂದರೂ ಸೇತುವೆ ಸಂಚಾರಕ್ಕೆ ತೆರೆದುಕೊಂಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.