ADVERTISEMENT

ಮುದ್ದೇಬಿಹಾಳ: ಬಿಜೆಪಿಯಿಂದ ಪ್ರತಿಭಟನಾ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 6:50 IST
Last Updated 10 ಜೂನ್ 2011, 6:50 IST

ಮುದ್ದೇಬಿಹಾಳ: ಶಾಂತಿಯುತವಾಗಿ ಸತ್ಯಾಗ್ರಹ ನಡೆಸುತ್ತಿದ್ದ ಯೋಗ ಗುರು ರಾಮದೇವ್ ಬಾಬಾ ಅವರನ್ನು ಮಧ್ಯರಾತ್ರಿಯಲ್ಲಿ ಬಂಧಿಸಿ ಅವರ ಹಾಗೂ ಸಾವಿರಾರು ಅನುಯಾಯಿಗಳ ಮೇಲೆ ಅಮಾನವೀಯ ಕ್ರಮ ಜರುಗಿಸಿದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನಾ ರ‌್ಯಾಲಿ ನಡೆಸಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಅವರ ನೇತೃತ್ವದಲ್ಲಿ ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾ ಕಾರರು ಕೇಂದ್ರ ಸಚಿವ ಕಪಿಲ್ ಸಿಬಲ್, ಪ್ರಣವ ಮುಖರ್ಜಿ, ಸೋನಿಯಾ ಗಾಂಧಿ ವಿರುದ್ಧ ಘೋಷಣೆ ಕೂಗಿದರು.

ಮಂಗಳಾದೇವಿ ಬಿರಾದಾರ ಅವರು ತಹಸೀಲ್ದಾರ ಪರವಾಗಿ ಶಿರಸ್ತೇದಾರ ಎಂ.ಎ.ಎಸ್. ಬಾಗವಾನ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪು ಹಣವನ್ನು ಮರಳಿ ದೇಶಕ್ಕೆ ತರಬೇಕು, ಹಾಗೂ ಭ್ರಷ್ಟಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎನ್ನುವ ಬಾಬಾ ರಾಮದೇವ ಅವರ ಮನವಿಗೆ ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಹೇಳಲಾಗಿದೆ. ಇದೇ ವೇಳೆ ಎಸ್.ಸಿ. ಹಾಗೂ ಎಸ್.ಟಿ.ಗಳಿಗೆ ತಾರತಮ್ಯ ಮಾಡುವ ಮಿಶ್ರಾ ವರದಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬಾರದು ಎಂದು ಪ್ರತ್ಯೇಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರಾಜೇಂದ್ರ ರಾಯಗೊಂಡ, ಎಸ್.ಟಿ.ಗೌಡರ, ಸಿದ್ದರಾಜ ಹೊಳಿ, ಗುಂಡು ಹೊಕ್ರಾಣಿ, ವೆಂಕನಗೌಡ ಪಾಟೀಲ, ಶಾಂತಗೌಡ ಮಂಗ್ಯಾಳ, ರಾಜು ಪಾಟೀಲ, ಹನುಮಂತ ನಲವಡೆ, ವೈ.ಎಚ್. ವಿಜಯಕರ, ಶಿವು ಶಿವಪೂರ, ಬಿ.ಎಚ್. ಮಾಗಿ, ಬಸವರಾಜ ಕೋಳೂರ, ಸಂಗಪ್ಪ ಬಾರಿಕಾಯಿ, ಬಸನಗೌಡ ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.