ADVERTISEMENT

ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 6:45 IST
Last Updated 15 ಫೆಬ್ರುವರಿ 2012, 6:45 IST

ಮುದ್ದೇಬಿಹಾಳ: ಉತ್ತಮ ರಸ್ತೆಗಳನ್ನು ನಿರ್ಮಿಸುವ ಜವಾಬ್ದಾರಿ ಸರ್ಕಾರದ ಮೇಲಿದ್ದು, ಬಹುದಿನಗಳ ಬೇಡಿಕೆಯನ್ನು ಕಡೆಗಣಿಸದೇ ಕೂಡಲೇ ತಾಲ್ಲೂಕಿನಾ ದ್ಯಂತ ಉತ್ತಮ ರಸ್ತೆಗಳನ್ನು ನಿರ್ಮಿ ಸಲು ಮುಂದಾಗಬೇಕೆಂದು ಕೃಷ್ಣಾ ಕಣಿವೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಆಗ್ರಹಿಸಿದರು.

ಅವರು ಮಂಗಳವಾರ ಪಟ್ಟಣದ ತಹಶೀಲ್ದಾರ ಕಚೇರಿ ಮುಂದೆ, ತಾಲ್ಲೂಕಿನ ಪ್ರಮುಖ ರಸ್ತೆಗಳನ್ನು ಮರು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.

ತಾಲ್ಲೂಕಿನಾದ್ಯಂತ ರಸ್ತೆಗಳು ತೀರಾ ಕೆಟ್ಟಿದ್ದು, ರೈತರು ಬೆಳೆದ ಕಬ್ಬು ಕಟಾವು ಮಾಡಲು ಯಾವುದೇ ಸಕ್ಕರೆ ಕಾರ್ಖಾನೆಗಳು ಮುಂದಾಗುತ್ತಿಲ್ಲ. ಉತ್ತಮ ರಸ್ತೆಗಳಿರದೇ ಸರ್ಕಾರವನ್ನು ಎಲ್ಲರೂ ನಿತ್ಯ ಶಪಿಸುತ್ತಿದ್ದಾರೆ. ಸರ್ಕಾರ ಜನರ ತಾಳ್ಮೆಯನ್ನು ಪರೀಕ್ಷಿಸದೇ ಕೂಡಲೇ ಉತ್ತಮ ಗುಣಮಟ್ಟದ ರಸ್ತೆಗಳನ್ನು ಮರು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.

14ನೇ ದಿನದಲ್ಲಿ ಸತ್ಯಾಗ್ರಹ: ಜಯ ಕರ್ನಾಟಕ ಸಂಘಟನೆ ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹ ಮಂಗಳವಾರ 14ನೇ ದಿನಕ್ಕೆ ಕಾಲಿರಿಸಿದೆ. ಸತ್ಯಾಗ್ರಹದಲ್ಲಿ ಪಾಲ್ಗೊಂಡ ರೆಡಿಮೇಡ್‌ಬಟ್ಟೆ ವ್ಯಾಪಾರಸ್ಥರ ಸಂಘದ ಸದಸ್ಯರು ಮೊದಲು ಬಸವೇಶ್ವರ ವೃತ್ತದಿಂದ ರ‌್ಯಾಲಿಯಲ್ಲಿ ಬಂದು ತಹಶೀಲ್ದಾರ ಸೋಮಲಿಂಗಪ್ಪ ಗೆಣ್ಣೂರ ಅವರನ್ನು ಭೇಟಿಯಾಗಿ ರಸ್ತೆ ಸುಧಾರಣೆ ಕುರಿತು ಮನವಿ ಸಲ್ಲಿಸಿದರು.

ಉಪವಾಸ ಸತ್ಯಾಗ್ರಹದಲ್ಲಿ ತಾಲ್ಲೂಕು ರೆಡಿಮೇಡ್ ಬಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹಿಬೂಬ ಮುಲ್ಲಾ, ಉಪಾಧ್ಯಕ್ಷ ಕುಮಾರಸ್ವಾಮಿ ಮಠ, ಕಾರ್ಯದರ್ಶಿ ಹಣಮಂತ ಸಾಸನೂರ, ಗೌರಿಶಂಕರ ಪುರಾಣಿಕಮಠ, ಅರವಿಂದ ಲದ್ದಿಮಠ, ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿ ಹಿಪ್ಪರಗಿ, ಕಾರ್ಯದರ್ಶಿ ಪ್ರಕಾಶ ಸಂಗಮ, ಉಪಾಧ್ಯಕ್ಷ ರಾಜು ತುಂಬಗಿ, ಚೇತನ ಓಸ್ವಾಲ್, ವಾಸುದೇವ ಶಾಸ್ತ್ರಿ, ಬಾಬು ಬಿರಾದಾರ, ಸಿಕಂದರ ಜಾನ್ವೇಕರ, ಸಿದ್ದರಾಜ ಹೊಳಿ, ಜೇಸಿ ಸಂಸ್ಥೆಯ ಅಧ್ಯಕ್ಷ ಪಾರಸ ಪೋರ‌್ವಾಲ್, ಕಿಟ್ಟು ಝಿಂಗಾಡೆ, ಇಂದ್ರಾಣಿ ಓಸ್ವಾಲ್, ರಾಜಶೇಖರ ಕಲ್ಯಾಣಮಠ, ಶರಣು ಬೂದಿಹಾಳಮಠ, ರಾಜು ಬಳ್ಳೊಳ್ಳಿ, ಸಿಕಂದರ್ ಜಾನ್ವೇಕರ, ಯಾಸೀನ ತುರಕನಗೇರಿ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.