ADVERTISEMENT

ವಂದಾಲ: ಸಂಭ್ರಮ ಸಡಗರದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 8:35 IST
Last Updated 15 ಜನವರಿ 2012, 8:35 IST

ಆಲಮಟ್ಟಿ: ವಂದಾಲದ ಸುಪ್ರಸಿದ್ಧ ಶ್ರಿ ಬನಶಂಕರಿ ದೇವಿಯ ರಥೋತ್ಸವ ಸಂಭ್ರಮ ಸಡಗರದಿಂದ ಶುಕ್ರವಾರ ಸಂಜೆ ಜರುಗಿತು. ಸಹಸ್ರಾರು ಭಕ್ತರ ಮಧ್ಯೆ ಜರುಗಿದ ಈ ರಥೋತ್ಸವ ಬನಶಂಕರಿ ದೇವಿಯ ದೇವಸ್ಥಾನದಿಂದ ಪಾದಕಟ್ಟೆ, ಅಲ್ಲಿಂದ ದೇವಸ್ಥಾನದವರೆಗೆ ನಡೆಯಿತು.

ರಥೋತ್ಸವ ನಡೆದಾಗ ಭಕ್ತರ ಘೋಷಣೆಗಳು, ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲೆಡೆಯೂ ಉತ್ತತ್ತಿ, ಬಾಳೆಹಣ್ಣು ತೂರಿದರು. ಚಿಕ್ಕಮಕ್ಕಳು ಕೂಡಾ ಉತ್ಸಾಹದಿಂದ ಭಾಗವಹಿಸಿದ್ದರು. ರಥೋತ್ಸವ ವೀಕ್ಷಿಸಲು ಜನ ಮುಖ್ಯ ರಸ್ತೆ, ಮಾಳಿಗೆ ಕಟ್ಟೆ ಮೇಲೆ ಸೇರಿದ್ದರು. ಮಹಿಳೆಯರು, ಮಕ್ಕಳು, ವಯೋವೃದ್ಧರು, ಯುವಕರು ಕೂಡಾ ಉತ್ಸಾಹದಿಂದ ಭಾಗವಹಿಸಿದ್ದರು.

ರಥ ಹಾಗೂ ದೇವಸ್ಥಾನವನ್ನು ವಿಶೇಷವಾಗಿ ಶೃಂಗಾರಗೊಳಿಸಲಾಗಿತ್ತು. ಇದಕ್ಕೂ ಮೊದಲು ಶ್ರಿ ಸಂಗಮೇಶ್ವರ ದೇವಸ್ಥಾನದಿಂದ ರಥದ ಭವ್ಯವಾದ ಕಳಸವನ್ನು ವಾದ್ಯ ಮೇಳದೊಂದಿಗೆ ಭಕ್ತಾದಿಗಳ ಮಂತ್ರ ಘೋಷಣೆಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು.
 
ಮಾರ್ಗ ಮಧ್ಯೆ ಅನೇಕ ಕಡೆ ಮಹಿಳೆಯರಾದಿಯಾಗಿ ಎಲ್ಲರೂ ಪೂಜೆ ಸಲ್ಲಿಸಿ, ಹಾರ ಅರ್ಪಿಸಿದರು. ನಂತರ ಕಳಸವನ್ನು ರಥದ ಪರಿಕರ ಬಳಿ ತರಲಾಯಿತು. ಕಳಸಾರೋಹಣದೊಂದಿಗೆ ರಥೋತ್ಸವ ಪ್ರಾರಂಭವಾಯಿತು. ರಥದ ಹಿಂದೆ ದೇವಿಯ ಪಲ್ಲಕ್ಕಿ ಉತ್ಸವವೂ ನಡೆಯಿತು. ರಥದ ಹಿಂದೆ ಮಹಿಳೆಯರು ಕಲಸ ಹಿಡಿದು ನಡೆದರು.

ಕಳೆದೆರೆಡು ದಿನಗಳಿಂದ ಬೆಳಗಿನ ಜಾವದಿಂದಲೇ ಸಹಸ್ರಾರು ಭಕ್ತರು ದೀಡ್ ನಮಸ್ಕಾರ ಹಾಕುವ ದೃಶ್ಯ ಕಂಡು ಬರುತ್ತಿದೆ. ಸೋಮವಾರ ಬೆಳಿಗ್ಗೆ ಸಕಲ ವಾದ್ಯ ಮೇಳದೊಂದಿಗೆ ಹುಚ್ಚಯ್ಯನ ಮೆರವಣಿಗೆಯೂ ನಡೆಯಿತು. ನಂತರ ದಿನವಿಡಿ ಗ್ರಾಮದ ಸಮಸ್ತ ಭಕ್ತರು, ಮಹಿಳೆಯರು ವಾದ್ಯ ಮೇಳದೊಂದಿಗೆ ಪ್ರತ್ಯೇಕವಾಗಿ ಬಂದು ದೇವಿ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.