ADVERTISEMENT

ವಾಸ್ತವ ಮಾಹಿತಿಗೆ ಕೇಂದ್ರ ತಂಡ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2012, 5:05 IST
Last Updated 24 ಆಗಸ್ಟ್ 2012, 5:05 IST

ವಿಜಾಪುರ: ಬೆಳೆ ಹಾನಿ ಕುರಿತಂತೆ ಗ್ರಾಮವಾರು, ಪ್ರತಿ ರೈತರ ಬೆಳೆವಾರು ವಾಸ್ತವ ಮಾಹಿತಿಯನ್ನು ಸ್ಥಳ ಪರಿಶೀಲನೆ ಮೂಲಕ ಸಂಗ್ರಹಿಸಿ ಸಲ್ಲಿಸುವಂತೆ ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ, ಕೇಂದ್ರ ಕೃಷಿ ಮತ್ತು ಸಹಕಾರಿ ಇಲಾಖೆಯ ಸಣ್ಣ ರೈತರ ಕೃಷಿ ವ್ಯವಹಾರಗಳ ವ್ಯವಸ್ಥಾಪಕ ನಿರ್ದೇಶಕ ಪರವೇಶ ಶರ್ಮಾ ಸೂಚಿಸಿದರು.

ಗುರುವಾರ ಜಿಲ್ಲೆಯ ಬರ ವೀಕ್ಷಣೆಯ ನಂತರ ಇಲ್ಲಿ ನಡೆದ ಜಿಲ್ಲೆಯ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದರು.

ಕಂದಾಯ, ಕೃಷಿ ಇಲಾಖೆಗಳ ಅಧಿಕಾರಿಗಳು ಗ್ರಾಮವಾರು ಭೇಟಿ ನೀಡಿ ಬೆಳೆ ಹಾನಿಯ ವಾಸ್ತವ ಮಾಹಿತಿಯನ್ನು ರೈತರ ವಾರು, ಬೆಳೆವಾರು, ಪ್ರದೇಶವಾರು ಸಂಗ್ರಹಿಸಿ ವಾರದೊಳಗೆ ಸಲ್ಲಿಸಬೇಕು. ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳ ಬೆಳೆ ಸಾಲ ಕುರಿತಂತೆ ವಿವರವಾದ ಮಾಹಿತಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಗೋ ಶಾಲೆಗಳನ್ನು ವಿಕೇಂದ್ರಿಕರಣಗೊಳಿಸಿ ಗ್ರಾಮವಾರು ಬೇಡಿಕೆಗನುಗುಣವಾಗಿ ತೆರೆಯಬೇಕು. ಸ್ಥಳೀಯವಾಗಿಯೇ ಮೇವು, ಜಾನುವಾರುಗಳಿಗೆ ನೀರು, ಗೋಶಾಲೆಗಳ ನಿರ್ವಹಣೆ ಹಾಗೂ ಮೇವು ಬ್ಯಾಂಕ್ ತೆರೆದು ಕನಿಷ್ಠ ದರದಲ್ಲಿ ಮೇವು ವಿತರಣೆ ಕುರಿತಂತೆ ಸರ್ಕಾರದೊಂದಿಗೆ ಸಮಾಲೋಚಿಸಲಾಗುವುದು ಎಂದರು. ಗೋಶಾಲೆಗಳ ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ ಕುರಿತಂತೆ ಜಿಲ್ಲಾ ಆಡಳಿತ ಕೈಗೊಂಡಿರುವ ಕ್ರಮದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.