ADVERTISEMENT

ವಿದ್ಯುತ್ ಸಮಸ್ಯೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 8:00 IST
Last Updated 22 ಮಾರ್ಚ್ 2011, 8:00 IST

ಮುದ್ದೇಬಿಹಾಳ: ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿಂದ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಗ್ರಾಮದಲ್ಲಿ ಜನತೆಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಪರೀಕ್ಷೆ ದಿನಗಳಾಗಿದ್ದರಿಂದ ಓದಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರು ಪೂರೈಕೆ, ಬಿತ್ತಿದ ಬೆಳೆಗಳ ರಕ್ಷಣೆಗೂ ಸಾಧ್ಯವಾಗುತ್ತಿಲ್ಲ. ದಿನವೂ ಗ್ರಾಮದಲ್ಲಿ ಪರದಾಟ ಶುರುವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮಸ್ಥರು ಮೊದಲು ಹೆಸ್ಕಾಮ್ ಕಚೇರಿಗೆ ನಂತರ ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗುರುನಾಥ ಬಿರಾದಾರ, ಗ್ರಾಮದಲ್ಲಿ ಕನಿಷ್ಠ ಎರಡು ತಾಸು ಸಹ ವಿದ್ಯುತ್ ಪೂರೈಕೆ ಇಲ್ಲ. ಗಿರಣಿ ಬೀಸಲು ವೋಲ್ಟೇಜ್ ಇಲ್ಲ, ಕೃಷಿಕರಂತೂ ನೀರಾವರಿ ಮರೆತಿದ್ದಾರೆ, ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಪರದಾಡಬೇಕಾಗಿದೆ, ವಾರದೊಳಗಾಗಿ ಸಮಸ್ಯೆ ಬಗೆ ಹರಿಯದಿದ್ದರೆ ಗ್ರಾಮಸ್ಥರು ಪಟ್ಟಣಕ್ಕೆ ಬಂದು ರಸ್ತಾ ರೋಖೋ ಮಾಡುವುದು ಅನಿವಾರ್ಯ ಆಗಲಿದೆ ಎಂದು ಹೇಳಿದರು.

ಶ್ರೀಶೈಲ ಸೂಳಿಭಾವಿ, ಎಚ್.ಬಿ. ಮೇಟಿ, ಎಸ್.ಎನ್. ಮೇಟಿ, ಆದಪ್ಪ ಗುಡಗುಂಟಿ, ನಾಗಪ್ಪ ರೂಢಗಿ,  ಯಮನಪ್ಪ ಮದರಿ ನಾಗೇಶ ತಂಗಡಗಿ, ಜನಕರಾಜ ನಾಡಗೌಡ್ರ, ಅಪ್ಪು ನಾಡಗೌಡ್ರ, ಮಲ್ಲಪ್ಪ ಮಾದರ, ರವಿ ಮೇಟಿ, ಬಿ.ಎಚ್.ಬಳವಾಟ, ಎಸ್.ಎಸ್.ಕೊಣ್ಣೂರ, ಮಂಜುನಾಥ ಹೊಸಮನಿ, ರವಿ ಪಾಟೀಲ, ಶ್ರೀಶೈಲ ಬಾಗಲಕೋಟೆ, ಮುತ್ತು ಪಲ್ಲೇದ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹೆಸ್ಕಾಮ್ ಸ್ಪಷ್ಟನೆ:
 ಬಸರಕೋಡ ಫೀಡರ್ ಮೇಲೆ ಒತ್ತಡ ಹೆಚ್ಚಾಗಿಎ. ಅದನ್ನು ವಿಭಜಿಸಿ ಎರಡು ಘಟಕ ಸ್ಥಾಪಿಸಲು ಕ್ರಮ ತೆಗೆದುಕೊಂಡಿದೆ. ಢವಳಗಿಯಿಂದ ಸಹ ವಿದ್ಯುತ್ ಪೂರೈಸಲು ಆದ್ಯತೆ ನೀಡಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಗ್ರಾಮಸ್ಥರಿಗೆ ವಿದ್ಯುತ್ ತೊಂದರೆ ಅನಿವಾರ್ಯ. ಅಲ್ಲಿಯವರೆಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಹೆಸ್ಕಾಮ್ ಎಂಜನಿಯರ್ ಎಸ್.ಆರ್. ಹೊಸೂರ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.