ADVERTISEMENT

ಶಿಕ್ಷಣ ಸಂಸ್ಥೆಗಳಿಗೆ ಸಹಾಯಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 10:50 IST
Last Updated 22 ಸೆಪ್ಟೆಂಬರ್ 2011, 10:50 IST

ಸಿಂದಗಿ: ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ರೂ.100 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಮನವಿ ಸಲ್ಲಿಸಿರುವುದಾಗಿ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದರು.

ಬುಧವಾರ ಪಟ್ಟಣದ ಅಂಜುಮನ್-ಎ-ಇಸ್ಲಾಂ ಶಿಕ್ಷಣ ಸಂಸ್ಥೆ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಈಗಾಗಲೇ ರಾಜ್ಯ ಸರ್ಕಾರ 307 ಅನುದಾನಿತ ಶಾಲೆಗಳಿಗೆ ರೂ. 65 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಮಾತನಾಡಿದರು.

ಶೈಕ್ಷಣಿಕ ಕ್ಷೇತ್ರ ಕಳೆದ 20 ವರ್ಷಗಳಿಂದ ನಿಂತ ನೀರಾಗಿದೆ. ದಿನ, ದಿನಕ್ಕೆ ಹೆಚ್ಚುತ್ತಿರುವ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ತಾವು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ರಾಜಕೀಯ ಇಚ್ಛಾಶಕ್ತಿ ತುಂಬಾ ಅಗತ್ಯವಾಗಿದೆ. ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪರಿವರ್ತನೆ ತರುವ ದಿಸೆಯಲ್ಲಿ ಸಾಕಷ್ಟು ಮುತವರ್ಜಿ ವಹಿಸುತ್ತಲಿದೆ ಎಂದರು.

ಸಿಂದಗಿ ತಾಲ್ಲೂಕಿನಲ್ಲಿ ಅಲ್ಪಸಂಖ್ಯಾತರರಿಗೆ ಶಿಕ್ಷಣ ನೀಡುವಲ್ಲಿ ಅಂಜುಮನ್-ಎ-ಇಸ್ಲಾಂ ಶಿಕ್ಷಣ ಸಂಸ್ಥೆ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶಹಾಪೂರ ಮೆಚ್ಚುಗೆ ವ್ಯಕ್ತಪಡಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಂಜುಮನ್-ಎ -ಇಸ್ಲಾಂ ಪ್ರಧಾನಕಾರ್ಯದರ್ಶಿ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಗುಣಾತ್ಮಕ ಶಿಕ್ಷಣ ನೀಡದಿದ್ದರೆ ಶಿಕ್ಷಕರು ಪಾಪದ ಹೊರೆ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶೈಕ್ಷಣಿಕ ಜ್ವಲಂತ ಸಮಸ್ಯೆಗಳಾದ ಕಾಲ್ಪನಿಕ ವೇತನ ಬಡ್ತಿ, ವೇತನ ತಾರತಮ್ಯ, ಆರ್ಥಿಕ ಮಿತವ್ಯಯ ಹೇರಿಕೆ ಮುಂತಾದವುಗಳ ಬಗ್ಗೆ ಬೋಧಕ ಸಿಬ್ಬಂದಿ ಈಶ್ವರ ಬಳೂಂಡಗಿ, ಶಂಕರ ಅಮಾತೆ, ಪ್ರಭುಲಿಂಗ ಲೋಣಿ, ಎಸ್.ಆರ್. ಕುಲಕರ್ಣಿ, ಆರ್.ಎ. ಹೊಸಗೌಡರ, ಎಸ್.ಎಂ. ನಾಯ್ಕೋಡಿ, ಎಫ್.ಎಂ. ಗಿರಗಾಂವ ಅವರು ಶಿಕ್ಷಕ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಶಹಾಪೂರ ಜೊತೆಗೆ ಸುದೀರ್ಘ ಚರ್ಚೆ ನಡೆಸಿದರು.

ವಿಶ್ರಾಂತ ಪ್ರಾಚಾರ್ಯ ಎ.ಐ.ಮುಲ್ಲಾ, ಪ್ರಾಚಾರ್ಯ ಎಂ.ಡಿ.ಬಳಗಾನೂರ, ಶಂಕರ ಅಮಾತೆ, ಶಬ್ಬೀರ ಭಾಗವಾನ, ಗಫೂರಸಾಬ ಮಸಳಿ, ಮಹಿಬೂಬ ಹಸರಗುಂಡಗಿ ವೇದಿಕೆಯಲ್ಲಿದ್ದರು.ಮೌಲಾನಾ ಮಹಮ್ಮದಅಲಿ ಕುರಾನ ಪಠಣ ಮಾಡಿದರು. ಉಪಪ್ರಾಚಾರ್ಯ ಆರ್.ಎ.ಹೊಸಗೌಡರ ಸ್ವಾಗತಿಸಿದರು. ಪ್ರೊ.ಈಶ್ವರ ಬಳೂಂಡಗಿ ನಿರೂಪಿಸಿದರು. ಎಸ್.ಆರ್.ಕುಲಕರ್ಣಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.