ADVERTISEMENT

ಸರ್ಕಾರ ನಿಗದಿ ಪಡಿಸಿದ ಕೂಲಿ ನೀಡಲಿ

​ಪ್ರಜಾವಾಣಿ ವಾರ್ತೆ
Published 3 ಮೇ 2012, 8:45 IST
Last Updated 3 ಮೇ 2012, 8:45 IST

ಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ದಿನಗೂಲಿಗಳಿಗೆ ಉದ್ಯೋಗ ಖಾತ್ರಿಯಡಿ ನೀಡುವ ಕೂಲಿಗಿಂತಲೂ ಕನಿಷ್ಟ ಕೂಲಿಯನ್ನು ನೀಡಲಾಗುತ್ತಿದ್ದು,  ಕೂಲಿಕಾರರ ಬದುಕು ಕಷ್ಟಕರವಾಗಿದೆ ಎಂದು ಅರಣ್ಯ ದಿನಗೂಲಿ ನೌಕರರ ವಿಜಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ ಮಾದರ ಹೇಳಿದರು.

ಆಲಮಟ್ಟಿಯ ರಾಕ್ ಉದ್ಯಾನ ದಲ್ಲಿ ಮಂಗಳವಾರ ನಡೆದ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿಸಿದರು. ಪ್ರಸ್ತುತ ಭೀಕರ ಬರಗಾಲ ಪರಿಸ್ಥಿತಿ ಉಂಟಾಗಿರುವ ಕಾರಣ ಸಾಕಷ್ಟು ಜನ ಮಹಾರಾಷ್ಟ್ರ ಸೇರಿದಂತೆ ಪರರಾಜ್ಯಕ್ಕೆ ಗುಳೆ ಹೋಗುತ್ತಿದ್ದಾರೆ, ಸರ್ಕಾರ ನಿಗದಿಪಡಿಸಿದ ಕೂಲಿಯನ್ನು ಸಮರ್ಪಕವಾಗಿ ಯಾರೂ ನೀಡುತ್ತಿಲ್ಲ,  ಹೀಗಾಗಿ ಅತ್ಯಂತ ದುಃಖದಿಂದ ಕಾರ್ಮಿಕ ದಿನಾಚರಣೆ ಆಚರಿಸಲಾ ಗುತ್ತದೆ ಎಂದರು.

ಬಾಗಲಕೋಟ ಘಟಕದ ಅಧ್ಯಕ್ಷ ಬಸವರಾಜ ಗುಡಿಮನಿ ಮಾತನಾಡಿ, ಕೂಲಿಕಾರ್ಮಿಕರಿಗೂ ವೇತನ ಸಹಿತ ರಜೆ ನೀಡಬೇಕು, ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ದಿನಗೂಲಿಗಳಿಗೆ ಅದರಲ್ಲಿಯೂ ಮಹಿಳಾ ದಿನಗೂಲಿ ಗಳಿಗೆ ಗರಿಷ್ಠ ಕೂಲಿ ನೀಡಿ ವಾರಕ್ಕೆ ಒಂದು ದಿನ ವೇತನ ಸಹಿತ ರಜೆ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಮೃತ್ಯುಂಜಯ ಹಿರೇಮಠ, ಭೀಮಾ ನಾಯಕ, ಅವ್ವಣ್ಣ ವಾಲೀಕಾರ, ಭೀಮಸಿ ಮಾದರ, ದುಂಡಪ್ಪ ಬಾರಕೇರ, ಮುತ್ತು ಬಡಿಗೇರ, ಶಿವಪ್ಪ ಕೋಟಿ, ಸಂಗಮೇಶ ಯರನಾಳ, ಬಾಸು ವಾಲೀಕಾರ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.