ಚಡಚಣ: ‘ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಜೊತೆಗೆ ಸಮಾಜದಲ್ಲಿ ಸಮಾನತೆ ಮೂಡಿಸಬಹುದು’ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಹೇಳಿದರು.
ಸಮೀಪದ ಜೇವೂರ ಗ್ರಾಮದಲ್ಲಿ ಮಂಗಳವಾರ ಹಠಯೋಗಿ ರೇವಣಿಸಿದ್ದೇಶ್ವರ ಸ್ವಾಮೀಜಿ 32ನೇ ಪುಣ್ಯಾರಾಧನೆ ನಿಮಿತ್ತ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ರಾಜಕೀಯದಲ್ಲಿ ಧರ್ಮ ಇರಬೇಕು. ವಿನಾ ಧರ್ಮದಲ್ಲಿ ರಾಜಕೀಯ ಮಾಡುವುದು ಸಲ್ಲದು. ಲಿಂಗಾಯತ ಹಾಗೂ ವೀರಶೈವ ಲಿಂಗಾಯತ ಎರಡೂ ಒಂದೆ. ಹೀಗಾಗಿ ಮುಖಂಡರು ಸಮಾಜ ಒಡೆಯುವ ಕೆಲಸ ಕೈಬಿಟ್ಟು ನಾಡಿನ ಅಭಿವೃದ್ಧಿಗೆ ಶ್ರಮಿಸಲಿ’ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾತನಾಡಿ, ‘ಗಡಿಭಾಗದ ಜೇವೂರ ಗ್ರಾಮದ ಕೈವಲ್ಯ ಧಾಮ ಮಠ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳೊಂದಿಗೆ, ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ’ ಎಂದರು.
ಬಂಥನಾಳ ವೃಷಭಲಿಂಗ ಸ್ವಾಮಿಜಿ, ಇಂಚಗೇರಿ ರೇಣುಕಾಚಾರ್ಯ ಶಿವಾಚಾರ್ಯ, ಮಂದ್ರೂಪದ ರೇಣುಕ ಶಿವಾಚಾರ್ಯ, ತಮದಡ್ಡಿಯ ಜಯಸಿದ್ದೇಶ್ವರ ಶಿವಾಚಾರ್ಯ, ತಡವಲಗಾದ ರಾಚೋಟೇಶ್ವರ ಶಿವಾಚಾರ್ಯ, ಕನ್ನೂರು ರೇವಣಸಿದ್ದೇಶ್ವರ ಶಿವಾಚಾರ್ಯ, ಆಲಮೇಲದ ಚಂದ್ರಶೇಖರ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು.
ಇದೇ ವೇಳೆ 50 ನವಜೋಡಿ ಹೊಸ ಜೀವನಕ್ಕೆ ಕಾಲಿರಿಸಿದವು. ಮುಖಂಡರಾದ ಕಾಸುಗೌಡ ಬಿರಾದಾರ, ಶಂಕರಗೌಡ ಬಿರಾದಾರ, ಶ್ರೀಮಂತ ಕಾಪಸೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.