ADVERTISEMENT

ಸಿಎಂ ಬರುತ್ತಿರುವ ಕಾರಣ ಕ್ಷೇತ್ರದ ಅಭಿವೃದ್ಧಿ ಕಾರ್ಯ’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 9:36 IST
Last Updated 24 ಅಕ್ಟೋಬರ್ 2017, 9:36 IST

ಇಂಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲಮನ್ನಾದ ಅನುದಾನ ಬಿಡುಗಡೆ ಮಾಡಿ, ರೈತರಿಗೆ ಮರುಸಾಲ ನೀಡುವಂತೆ ಮಾಡಬೇಕು ಎಂದು ಮಾಜಿ ಶಾಸಕ ರವಿಕಾಂತ ಪಾಟೀಲ ಒತ್ತಾಯಿಸಿದರು. ಕಳೆದ ಜೂನ್‌ನಲ್ಲಿ ಸಹಕಾರಿ ಸಂಘ ಗಳಲ್ಲಿರುವ ರೈತರ ₹ 50 ಸಾವಿರ ಸಾಲ ಮನ್ನಾ ಮಾಡಿರುವುದಾಗಿ ಘೋಷಿಸಿರುತ್ತಾರೆ.

ಆದರೆ, ಆ ಹಣ ಸಹಕಾರಿ ಸಂಘಗಳಿಗೆ ಇನ್ನೂವರೆಗೆ ಜಮಾ ಮಾಡದ ಕಾರಣ ಮರು ಸಾಲ ದೊರೆಯುತ್ತಿಲ್ಲ. ಆದರೆ, ಮುಖ್ಯಮಂತ್ರಿಗಳು ನುಡಿದಂತೆ ನಡೆಯುತ್ತಿದ್ದೇವೆ ಎಂದು ಒಣ ಪ್ರಚಾರದಲ್ಲಿ ತೊಡಗಿದ್ದಾರೆ ದೂರಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಮತಕ್ಷೇತ್ರದಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಜಮೀನು ಕಳೆದು ಕೊಂಡ ರೈತರಿಗೆ ತಕ್ಷಣ ಪರಿಹಾರ ನೀಡಬೇಕು.

ADVERTISEMENT

ಜೂನ್, ಜುಲೈ ತಿಂಗಳಲ್ಲಿ ಸರಿಯಾಗಿ ಮಳೆಯಾಗದೇ ರೈತರ ಹೆಸರು, ಉದ್ದು ಬೆಳೆಗಳು ಓಣಗಿವೆ. ಸೆಪ್ಟಂಬರ್‌ನಲ್ಲಿ ಹೆಚ್ಚಿನ ಮಳೆಯಾದ ಕಾರಣ ಬೆಳೆಗಳು ಹಾಳಾಗಿವೆ. ಹಾನಿಗೊಳಗಾದ ರೈತರಿಗೆ ರೈತರಿಗೆ ಪರಿಹಾರ ನೀಡಬೇಕು ಒತ್ತಾಯಿಸಿದರು.

‘ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃಧ್ದಿ ಕಾರ್ಯಗಳಾಗುತ್ತಿವೆ ಎಂದು ಶಾಸಕರು ಹೇಳುತ್ತಿರುವುದು ಸ್ವಾಗತಾರ್ಹ. ಅಭಿವೃದ್ಧಿ ಕಾರ್ಯಕ್ಕೆ ತಮ್ಮ ಸಹಕಾರ ಕೂಡ ಇದೆ. ಆದರೆ, ನಾಲ್ಕೂವರೆ ವರ್ಷಗಳಲ್ಲಿ ಪಟ್ಟಣದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಮುಖ್ಯಮಂತ್ರಿ ಆಗಮನದ ವೇಳೆಗೆ ಏಕೆ ನಡೆಯುತ್ತಿವೆ’ ಎಂದು ಪ್ರಶ್ನಿಸಿದ ಅವರು, ‘ಸಿಎಂ ಆಗಮನದ ಹಿನ್ನೆಲೆ ಅಭಿವೃದ್ಧಿ ನಡೆದಿವೆಯೇ ಹೊರತು, ಸರ್ಕಾರಕ್ಕೆ ಅಭಿವೃದ್ಧಿ ಪರ ಚಿಂತನೆಯಿಂದಲ್ಲ.

ಬಹುತೇಕ ಕಾಮಗಾರಿಗಳು ಕಳಪೆ ಯಾಗಿವೆ. ಭೀಮಾಶಂಕರ ಸಕ್ಕರೆ ಕಾರ್ಖಾನೆ ಆರಂಭಿಸಿದ್ದು ಸ್ವಾಗತಾರ್ಹ. ಅದು ಸಹಕಾರಿ ರಂಗದಲ್ಲಿಯೇ ಮುಂದುವರಿಯಬೇಕು. ರೈತಪರವಾಗಿ ಅಲ್ಲಿ ನಿರ್ಣಯಗಳಾಗಬೇಕು’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.