ADVERTISEMENT

ಸೇವಾ ಭದ್ರತೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 5:30 IST
Last Updated 14 ಅಕ್ಟೋಬರ್ 2011, 5:30 IST
ಸೇವಾ ಭದ್ರತೆಗೆ ಒತ್ತಾಯ
ಸೇವಾ ಭದ್ರತೆಗೆ ಒತ್ತಾಯ   

ಗದಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ  ರಾಜ್ಯ ಸಂಯುಕ್ತ ವಸತಿ ನಿಲಯಗಳ ಕಾರ್ಮಿಕರ ಸಂಘದ ನೇತೃತ್ವದಲ್ಲಿ ವಸತಿ ನಿಲಯಗಳ ಕಾರ್ಮಿಕರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ವಸತಿ ನಿಲಯಗಳ ಕಾರ್ಮಿಕರು ಸಾಮಾಜಿಕ ಭದ್ರತೆ ಮತ್ತು ಕೆಲಸದ ಭದ್ರತೆ ಇಲ್ಲದೆ ಅಸಹಾಯಕ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 8 ಗಂಟೆಗಳ ಕೆಲಸದ ಅವಧಿಯ ಬದಲಾಗಿ ಸುಮಾರು 12ರಿಂದ14 ಗಂಟೆಗಳ ಕೆಲಸ ಮಾಡುತ್ತಿದ್ದಾರೆ.

ಇವರು ಕಾಯಂ ನೌಕರರು ನಿರ್ವಹಿಸುವ ಕೆಲಸವನ್ನೇ ನಿರ್ವಹಿಸಿದ್ದರೂ, ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಗೊಳಿಸಿಲ್ಲ, ಕನಿಷ್ಠ ವೇತನ ಸುಮಾರು 5300 ರೂಪಾಯಿ ಇದ್ದರೂ, ಒಂದೂವರೆ ಸಾವಿರ ರೂಪಾಯಿಯಿಂದ ಎರಡೂವರೆ ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಜಿಲ್ಲೆಯ ಹಲವಾರು ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ನೂರಾರು ಹುದ್ದೆಗಳು ಖಾಲಿ ಬಿದ್ದಿವೆ. ಇವುಗಳನ್ನು ನೇಮಕ ಮಾಡುವಾಗ ಸದ್ಯ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನೇ ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಇ-ಬ್ಯಾಂಕಿಂಗ್ ಮೂಲಕ ನೌಕರರ ಖಾತೆಗೆ ವೇತನ ಪಾವತಿಯಾಗುವಂತಹ ವ್ಯವಸ್ಥೆ ಕಲ್ಪಿಸಬೇಕು. ಕಾರ್ಮಿಕರಿಗೆ ಇಎಸ್‌ಐ, ಭವಿಷ್ಯನಿಧಿ, ಕಾನೂನುಬದ್ಧ ರಜೆ ಸೌಲಭ್ಯವನ್ನು ನೀಡಬೇಕು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿಯಾಗಬೇಕು, ಅಡುಗೆ ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ಕ್ರಮ ಒದಗಿಸಬೇಕು.
 
15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ನಗರದ ಗಾಂಧಿ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ನಂತರ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ ಯಾದಗಿರಿ, ಕಾರ್ಯದರ್ಶಿ ಎಂ.ರಾಮಣ್ಣ, ಜಯಮ್ಮ, ರಾಮಚಂದ್ರ, ಮೊಹಮ್ಮದ್, ಪ್ರೇಮ ಬಿರಾದಾರ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.