ADVERTISEMENT

ಹಿಂದೂಗಳು ದ್ವಿತೀಯ ದರ್ಜೆ ನಾಗರಿಕರಾ..?

ಸಂತರ ಸಮಾವೇಶದಲ್ಲಿ ಆರ್‌ಎಸ್‌ಎಸ್‌ ಉತ್ತರ ಪ್ರಾಂತ ಸಹ ಸಂಘ ಚಾಲಕ ಅರವಿಂದರಾವ್ ದೇಶಪಾಂಡೆ ಗರಂ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 7:45 IST
Last Updated 31 ಮಾರ್ಚ್ 2018, 7:45 IST
ವಿಜಯಪುರದ ಸಂಗನಬಸವ ಮಂಗಲ ಭವನದಲ್ಲಿ ಶುಕ್ರವಾರ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಹಿಂದೂ ಜನ ಜಾಗೃತಿ ಚಿಂತನಗೋಷ್ಠಿಯಲ್ಲಿ ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರು ಮಾತನಾಡಿದರು. ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ, ಪ್ರಕಾಶ ಮಹಾರಾಜರು, ಮಲ್ಲಿಕಾರ್ಜುನ ಸ್ವಾಮೀಜಿ, ಅರವಿಂದರಾವ್‌ ದೇಶಪಾಂಡೆ, ಗೋಪಾಲ್‌ ಇದ್ದಾರೆ
ವಿಜಯಪುರದ ಸಂಗನಬಸವ ಮಂಗಲ ಭವನದಲ್ಲಿ ಶುಕ್ರವಾರ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಹಿಂದೂ ಜನ ಜಾಗೃತಿ ಚಿಂತನಗೋಷ್ಠಿಯಲ್ಲಿ ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರು ಮಾತನಾಡಿದರು. ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ, ಪ್ರಕಾಶ ಮಹಾರಾಜರು, ಮಲ್ಲಿಕಾರ್ಜುನ ಸ್ವಾಮೀಜಿ, ಅರವಿಂದರಾವ್‌ ದೇಶಪಾಂಡೆ, ಗೋಪಾಲ್‌ ಇದ್ದಾರೆ   

ವಿಜಯಪುರ: ‘ಲವ್ ಜಿಹಾದ್, ಮತಾಂತರ, ರಾಜ್ಯ ಸರ್ಕಾರದಿಂದ ನಡೆದ ಅಲ್ಪಸಂಖ್ಯಾತರ ತುಷ್ಟೀಕರಣ ವನ್ನು ಸೂಕ್ಷ್ಮವಾಗಿ ಅವಲೋಕಿಸಿದ ಸಂದರ್ಭ, ಹಿಂದೂಗಳನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ಕಾಣಲಾಗುತ್ತಿದೆಯೇ ? ಎಂಬ ಆತಂಕ ಕಾಡಲಾರಂಭಿಸಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಸಹ ಸಂಘ ಚಾಲಕ ಅರವಿಂದರಾವ್‌ ದೇಶಪಾಂಡೆ ಕಳವಳ ವ್ಯಕ್ತಪಡಿಸಿದರು.

ನಗರದ ಸಂಗನಬಸವ ಮಂಗಲ ಭವನದಲ್ಲಿ ಶುಕ್ರವಾರ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಹಿಂದೂ ಜನ ಜಾಗೃತಿ ಚಿಂತನಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಅವರು, ‘ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿ ಯರನ್ನು ದಿಕ್ಕು ತಪ್ಪಿಸುವ ವ್ಯವಸ್ಥೆ ನಡೆಯುತ್ತಲೇ ಇದೆ. ಇನ್ನೊಂದೆಡೆ ಸರ್ಕಾರ ಸಹ ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ಮಾತ್ರ ಹಿಂಪಡೆದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಗೋ ರಕ್ಷಕರ ಮೇಲೆಯೇ ದೂರು ದಾಖಲಿಸುವ ಮೂಲಕ ಹಿಂದೂ ಸಂಘಟನೆಗಳನ್ನು, ಹಿಂದೂ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ದಮನಿಸುವ ವ್ಯವಸ್ಥೆ, ಷಡ್ಯಂತ್ರ ನಡೆದಿದೆ’ ಎಂದು ಅವರು ದೂರಿದರು.

ADVERTISEMENT

‘ದೇಶ ಉಳಿದರೆ ಮಾತ್ರ ಹಿಂದೂ ಧರ್ಮ ಉಳಿಯುತ್ತದೆ. ಹಿಂದೂ ಧರ್ಮ ಉಳಿದರೆ ಮಾತ್ರ ಹಿಂದೂತ್ವ ಉಳಿಯುತ್ತದೆ. ಹಿಂದೂತ್ವ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳ್ಳಬೇಕಿರುವುದು ಇಂದಿನ ಅತ್ಯಂತ ಅವಶ್ಯಕತೆಗಳಲ್ಲೊಂದು’ ಎಂದು ದೇಶಪಾಂಡೆ ಹೇಳಿದರು.

ಗೋ ರಕ್ಷಣೆ: ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ ‘ಅಮೆರಿಕದಲ್ಲಿ ಕ್ರಿಶ್ಚಿಯನ್ನರು ಬಹು ಸಂಖ್ಯಾತರಿದ್ದರೂ, ಬೆರಳೆಣಿಕೆ ಯಷ್ಟು ಚರ್ಚ್‌ಗಳಿವೆ. ಆದರೆ ನಮ್ಮಲ್ಲಿ ಎಣಿಸಲಾರದಷ್ಟು ಚರ್ಚ್‌ ಗಳು ನಿರ್ಮಾಣಗೊಳ್ಳುತ್ತಿವೆ. ಮತಾಂತರ ವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಈ ಕಾರಣಕ್ಕಾಗಿಯೇ ಮತಾಂತರ ಹೆಚ್ಚುತ್ತಿದೆ. ಹಿಂದೂ ಧರ್ಮದ ಸಂಸ್ಕೃತಿ ಅತ್ಯಂತ ಶ್ರೇಷ್ಠ. ಈ ವಿಚಾರಗಳನ್ನು ಬಿತ್ತುವ ಕೆಲಸ ನಡೆಯಬೇಕಿದೆ’ ಎಂದರು.

ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರು ಆಶೀವರ್ಚನ ನೀಡಿ ‘ಮತಾಂತರ ಎಂಬ ಪಿಡುಗು ಹೋಗಲಾಡಿಸಲು ಯುವ ಜನರು ಜಾಗೃತಿಗೊಳ್ಳಬೇಕು. ಮತಾಂತರ ಹಿಂದೂ ಧರ್ಮವನ್ನು ಕಾಡುತ್ತಿದೆ. ಈ ಪಿಡುಗು ದೂರವಾಗಬೇಕು. ಇದರ ನಿರ್ಮೂಲನೆಗಾಗಿ ಯುವ ಸಮೂಹ ಸಜ್ಜಾಗಬೇಕು’ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ -ಆಂಧ್ರಪ್ರದೇಶದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್‌ ಮಾತನಾಡಿದರು. ಪ್ರಕಾಶ ಮಹಾರಾಜರು, ಮಲ್ಲಿಕಾರ್ಜುನ ಸ್ವಾಮೀಜಿ, ಧರ್ಮ ಜಾಗರಣಾ ವೇದಿಕೆ ಪ್ರಮುಖರಾದ ದಾಮೋದರ್, ಮುನಿಯಪ್ಪ, ವಿಎಚ್‌ಪಿ ಜಿಲ್ಲಾ ಅಧ್ಯಕ್ಷ ಬಸಯ್ಯ ಹಿರೇಮಠ, ಬಿ.ಎಸ್.ಪಾಟೀಲ ಉಪಸ್ಥಿತರಿದ್ದರು.

**

ಜಗತ್ತೇ ಹಿಂದೂ ಸಂಸ್ಕೃತಿ ಕೊಂಡಾಡಿ ಗೌರವಿಸುತ್ತಿರುವಾಗ ನಮ್ಮಲ್ಲಿಯೇ ಹಿಂದೂಗಳನ್ನು ದ್ವಿತೀಯ ದರ್ಜೆ ಪ್ರಜೆಯನ್ನಾಗಿ ಕಾಣುತ್ತಿರುವುದು ವಿಪರ್ಯಾಸ.

-ಅರವಿಂದರಾವ್‌ ದೇಶಪಾಂಡೆ, ಆರ್‌ಎಸ್‌ಎಸ್‌ ಉತ್ತರ ಪ್ರಾಂತ ಸಹ ಸಂಘ ಚಾಲಕ

**

ಗೋ ಹತ್ಯೆ ನಿಷೇಧಿಸುವ, ಗೋ ರಕ್ಷಣೆಗೆ ಬದ್ಧವಾಗಿರುವ ಸರ್ಕಾರದಿಂದ ಮಾತ್ರ ಹಿಂದೂ ರಾಷ್ಟ್ರ ನಿರ್ಮಾಣವಾಗುತ್ತದೆ.

-ಸೋಮಲಿಂಗ ಸ್ವಾಮೀಜಿ, ಕೆಸರಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.