ADVERTISEMENT

ಹುಬ್ಬಳ್ಳಿ ಸಮಾವೇಶದಲ್ಲಿ ಭಾಗವಹಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 5:50 IST
Last Updated 7 ಜನವರಿ 2012, 5:50 IST

ಆಲಮಟ್ಟಿ: ಹುಬ್ಬಳ್ಳಿಯಲ್ಲಿ  ಆರ್.ಎಸ್.ಎಸ್.ನ ಉತ್ತರ ಪ್ರಾಂತದ ಹಿಂದೂ ಶಕ್ತಿ ಸಮಾವೇಶ ಇದೇ 27 ರಿಂದ ಜರುಗುತ್ತಿದ್ದು, ಈ ಭಾಗದ ಪ್ರತಿ ಗ್ರಾಮದಿಂದಲೂ ಕಾರ್ಯಕರ್ತರು ಭಾಗವಹಿಸಬೇಕು, ಅದಕ್ಕಾಗಿ ಇಲ್ಲಿನ ಮುಖಂಡರು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕೆಂದು ಭಾ.ಜ.ಪ. ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ ಹೇಳಿದರು.

ಗೊಳಸಂಗಿಯ ಪವಾಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದೂ ಶಕ್ತಿ ಸಮಾವೇಶದ ಅಂಗವಾಗಿ ಬುಧವಾರ ಜರುಗಿದ ನಿಡಗುಂದಿ, ಗೊಳಸಂಗಿ ಜಿ.ಪಂ. ಮತಕ್ಷೇತ್ರದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

 ಸಜ್ಜನ, ಸ್ತ್ರೀ, ಸಂತ ಶಕ್ತಿಗಳ ಸಂಗಮವೇ ಹಿಂದೂ ಶಕ್ತಿ ಸಂಗಮ ಎಂದು ಬಣ್ಣಿಸಿದ ಅವರು ಇಡೀ ವಿಶ್ವದಲ್ಲಿ ಭಾರತೀಯ ಸಂಸ್ಕೃತಿಯನ್ನು ಹರಡಿಸುವುದರ ಜೊತೆಗೆ ಸಮಾಜಕ್ಕೆ ಬೇಕಾಗಿರುವ ವ್ಯಕ್ತಿಗಳ ನಿರ್ಮಾಣವೇ ಆರ್. ಎಸ್.ಎಸ್.ನ ಗುರಿಯಾಗಿದೆ ಎಂದರು.

ಶಾಸಕ ಎಸ್.ಕೆ. ಬೆಳ್ಳುಬ್ಬಿ, `ಈ ದೇಶದ ಪ್ರತಿ ಕುಟುಂಬಕ್ಕೂ ಆರ್.ಎಸ್.ಎಸ್.ನ ಸಂಸ್ಕಾರ ಅಗತ್ಯವಿದೆ, ಕುಟುಂಬದಲ್ಲಿ ಸಂಸ್ಕಾರ ಕಡಿಮೆಯಾಗಿರುವ ಫಲವಾಗಿ ಸಾಮರಸ್ಯ ಕೊರತೆ ಹೆಚ್ಚಾಗಿ, ಸಾಮಾಜಿಕ ಸಮಸ್ಯೆ ಉಲ್ಬಣವಾಗುತ್ತಿದೆ ಎಂದರು. ಈ ಸಂಕ್ರಾಂತಿಯ ನಂತರ ಬಸವನಬಾಗೇವಾಡಿ ತಾಲ್ಲೂಕಿನ ಪ್ರತಿ ಗ್ರಾಮದಲ್ಲಿಯೂ ಜ. 15 ರಿಂದ ಜ. 25 ರವರೆಗೆ 10 ದಿನಗಳ ಕಾಲ ಆರ್.ಎಸ್.ಎಸ್.ನ ಶಾಖಾ ಘಟಕವನ್ನು ನಡೆಸಿ, ಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದು. ನಂತರ ಆ ಗ್ರಾಮದಲ್ಲಿ ನಿರಂತರ ಶಾಖಾ ನಡೆಸುವ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕಲ್ಲೂರ, ಹುಬ್ಬಳ್ಳಿಯಲ್ಲಿ ಜರುಗಲಿರುವ ಹಿಂದೂ ಶಕ್ತಿ ಸಮಾವೇಶದ ಬಗ್ಗೆ ವಿವರಣೆ ನೀಡಿದರು. ಪ್ರತಿ ಬೂತ್ ಮಟ್ಟದಿಂದ ಇಬ್ಬರು ಬಿಜೆಪಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ಪದ್ಮಾವತಿ ಗುಡಿ, ಜಿ.ಪಂ. ಸದಸ್ಯ ಶಿವಾನಂದ ಅವಟಿ, ಸಂಗರಾಜ ದೇಸಾಯಿ, ಸಂಗನಗೌಡ ರಾಯಗೊಂಡ, ಮಲ್ಲಿಕಾರ್ಜುನ ನಾಯಕ, ಟಿ.ಟಿ. ಹಗೇದಾಳ, ಪ್ರಶಾಂತ ಪವಾರ, ಶ್ರಿಧರ ಸ್ವಾಮಿ ದೇವಾಂಗಮಠ, ರಾಮಣ್ಣ ಬಣ್ಣದ, ಹನುಮಂತ ಬಿರಾದಾರ, ಅರ್ಜುನ ಪವಾರ, ಗುರುರಾಜ ಕೂಚಬಾಳ, ಆನಂದ ಬಿಷ್ಟಗೊಂಡ, ರಾಮಕೃಷ್ಣ ಕಾಳಗಿ  ಮೊದಲಾದವರಿದ್ದರು. ದೇವೇಂದ್ರ ಬಳಮಕರ ಸ್ವಾಗತಿಸಿದರು. ಶಂಕರಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಅವಟಿ ವಂದಿಸಿದರು. 

ಇಂಡಿ ವರದಿ
ಸ್ವಯಂ ಸೇವಕ ಸಂಘದ ತಳಹದಿಯ ಮೇಲೆ ಬೆಳೆದುಬಂದಿರುವ ಬಿಜೆಪಿಯನ್ನು ಸಂಘಟಿಸುವುದಕ್ಕಾಗಿ ಮತ್ತು ಸಂಘದ ತತ್ವ ಸಿದ್ಧಾಂತಗಳನ್ನು ಹೊಸದಾಗಿ ಬಿಜೆಪಿ ಪಕ್ಷ ಸೇರಿದವರಿಗೆ ತಿಳಿಸಿಕೊಡುವ ಮಹಾ ಉದ್ದೇಶದಿಂದ ಜನವರಿ ಕೊನೆಯ ವಾರದಲ್ಲಿ ಹುಬ್ಬಳ್ಳಿಯಲ್ಲಿ “ಹಿಂದೂ ಶಕ್ತಿ ಸಂಗಮ” ಕಾರ್ಯಕ್ರಮ ಆಯೋಜಿಸಿಲಾಗಿದೆ. ಅದರಲ್ಲಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿಯ ಬಿಜೆಪಿ ಕಾರ್ಯಕರ್ತರು ಭಾಗವಹಿಸಬೇಕೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲಕುಮಾರ ಸುದಾಮ ಸಲಹೆ ನೀಡಿದರು.

ಅವರು ಪಟ್ಟಣದ ಶ್ರೆ ಶಾಂತೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಆಯೋಜಿಸಿದ್ದ “ತಾಲ್ಲುಕು ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಶಾಸಕ ಡಾ, ಸಾರ್ವಭೌಮ ಬಗಲಿ, ಬಿಜೆಪಿ ಕಾರ್ಯಕರ್ತರು ಪ್ರತಿಯೊಬ್ಬರೂ ಶಿಬಿರದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಂಡರು.

ಸಭೆಯಲ್ಲಿ ಪುರಸಭೆಯ ಉಪಾಧ್ಯಕ್ಷ ಪ್ರದೀಪ ಮೂರಮನ, ಮುತ್ತು ದೇಸಾಯಿ, ಪ್ರೊ,ಸಿದ್ದಲಿಂಗ ಹಂಜಗಿ, ದೇವೇಂದ್ರ ಕುಂಬಾರ, ಲಕ್ಷ್ಮಣ ಲಾಳಸಂಗಿ, ಎಚ್.ಆರ್.ಉಟಗಿ, ರಾಮಸಿಂಗ ಕನ್ನೊಳ್ಳಿ, ಮಲ್ಲಿಕಾರ್ಜುನ ಕಿವಡೆ, ಪರಮೇಶ್ವರ ಬಗಲಿ, ಅಶೋಕಗೌಡ ಪಾಟೀಲ, ಮಲ್ಲಯ್ಯಾ ಪತ್ರಿಮಠ, ಶಿವಪ್ಪ ಬಿಲ್ಕಾರ ರಾಜು ಮಗಿಮಠ, ಹಣಮಂತ ಬಿರಾದಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.