ADVERTISEMENT

ಹೆಚ್ಚುತ್ತಿರುವ ವೃದ್ಧಾಶ್ರಮಗಳು: ವಿಷಾದ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 6:25 IST
Last Updated 20 ಫೆಬ್ರುವರಿ 2012, 6:25 IST

ಬಸವನಬಾಗೇವಾಡಿ: `ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬ ಸಂಸ್ಕೃತಿ ಪ್ರಪಂಚದಲ್ಲಿ ಎಲ್ಲಾದರೂ ಇದ್ದರೆ ಅದು ಭಾರತದಲ್ಲಿ ಮಾತ್ರ. ಅಂತಹ ಸಂಸ್ಕೃತಿ ಹೊಂದಿದ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ದೊಡ್ಡ ದುರಂತ~ ಎಂದು ಯರನಾಳ ಹಾಗೂ ಉಕ್ಕಲಿಯ ಗುರುಸಂಗನಬಸವ ಸ್ವಾಮೀಜಿ ವಿಷಾದಿಸಿದರು.

ಪಟ್ಟಣದ ಅಕ್ಕನಾಗಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕ ಭಾನುವಾರ ಹಮ್ಮಿಕೊಂಡಿದ್ದ ಸಂಘದ ದಶಮಾನೋತ್ಸವ ಹಾಗೂ 75 ವರ್ಷ ತುಂಬಿದ ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಿರಿಯರು ಹಾಕಿ ಕೊಟ್ಟ ಸಂಸ್ಕಾರಗಳನ್ನು ಎಲ್ಲರೂ ಮುಂದುವರಿಸಿಕೊಂಡು ಹೋಗಬೇಕು. ಹಾಗಾಗಬೇ ಕಾದರೆ ಸಮಾಜದಲ್ಲಿ ಹಿರಿಯರನ್ನು ಗೌರವ ಆದರಗಳಿಂದ ಕಾಣಬೇಕು. ಹಿರಿಯರಿಗೆ ಬೇಕಾಗಿರುವುದು ಪ್ರೀತಿ, ವಿಶ್ವಾಸ ಅದನ್ನು ಅರಿತು ಹಿರಿಯರನ್ನು ಕುಟುಂಬದಿಂದ ದೂರ ಇಡುವ ವ್ಯವಸ್ಥೆ ನಿಲ್ಲಬೇಕು. ನೌಕರಿಯಿಂದ ನಿವೃತ್ತಿ ಹೊಂದಿದ ನಂತರ ಎಲ್ಲಾ ಸಂಬಂಧಗಳಿಂದ ನಿವೃತ್ತಿ ನೀಡಬಾರದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ ಸದಸ್ಯ ಶಿವಾನಂದ ಅವಟಿ, ಸಮಾಜದಲ್ಲಿ ಯಾವುದೇ ಕಾರ್ಯಕ್ರಮ ನಡೆಯಬೇಕಾದರೆ ಹಿರಿಯರ ಮಾರ್ಗ ದರ್ಶನ ಅವಶ್ಯವಾಗಿದೆ. ಅವರಿಂದ ಸಂಸ್ಕಾರಗಳನ್ನು, ತಿಳಿವಳಿಕೆಯ ಮಾತುಗಳನ್ನು ತಿಳಿದು ಕಿರಿಯರು ಮುಂದುವರಿಯುವ ಅವಶ್ಯವಿದೆ ಎಂದರು.

ವಕೀಲ ಶಿವಾನಂದ ಕಲ್ಲೂರ, ಪುರಸಭೆ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ತಹಶೀಲ್ದಾರ ಮಹಾದೇವಪ್ಪ ಮುರಗಿ, ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಸ್. ನಾಗಠಾಣ, ನಿವೃತ್ತ ಉಪನಿರ್ದೇಶಕ ಎ.ಎನ್. ನಾಗರಹಳ್ಳಿ, ಸಾಹಿತಿ ಬಿ.ಎಂ. ಹಿರೇಮಠ ಮಾತನಾಡಿದರು.

ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಎಸ್.ಕೆ. ಸೋಮನಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಎಸ್.ಎಸ್. ಝಳಕಿ ವರದಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಎಸ್.ಬಿ. ಬಶೆಟ್ಟಿ, ಬಿ.ಎಸ್. ಪಟ್ಟಣದ, ಎಫ್.ಡಿ. ಮೇಟಿ, ಎಸ್.ಆರ್. ಹೂಗಾರ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 75ವರ್ಷ ತುಂಬಿದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ನಿವೃತ್ತ ಪ್ರಾಚಾರ್ಯ ಕೆ.ಬಿ. ಕಡೇಮನಿ ಸ್ವಾಗತಿಸಿದರು. ಶಿಕ್ಷಕ ಎಂ.ಎಸ್. ಬ್ಯಾಹಟ್ಟಿ ನಿರೂಪಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಎಸ್. ಕಟ್ಟಿ ವಂದಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.