ವಿಜಾಪುರ: ಮುತ್ತಿನಂತಹ ಮಾತುಗಾರಿಕೆ ಹಿತಮಿತವಾಗಿರುತ್ತದೆ, ಬದುಕಿನ ಅಂತರಾಳದ ಭಾವವೇ ಕವಿತೆಯಾಗಿರಬೇಕು. ಕಾವ್ಯದ ಬರವಣಿಗೆಯಲ್ಲಿ ಕಾವ್ಯ, ಭಾವ ಹಾಗೂ ಆಸೆ ತುಂಬಿರಬೇಕು. ಕಾವ್ಯದ ಕಲ್ಪನೆಗೆ ವಿನ್ಯಾಸ ಇರಬೇಕು. ಕಾವ್ಯ ಶಬ್ದಮಣಿದರ್ಪಣ ಇದ್ದ ಹಾಗೆ ಎಂದು ಹಿರಿಯ ಸಾಹಿತಿ ಸಂಗಮೇಶ ಬದಾಮಿ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯ ವತಿಯಿಂದ ಪುರಾತತ್ವ ವಸ್ತು ಸಂಗ್ರಹಾಲಯದ 101ನೇ ವರ್ಷಾಚರಣೆ ನಿಮಿತ್ತ ಮಂಗಳವಾರ ಹಮ್ಮಿಕೊಂಡ ಕವಿಗೋಷ್ಠಿ ಕಾರ್ಯಕ್ರಮ ಸಸಿಗೆ ನೀರುಣಿಸಿ, ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರೊ. ಯು.ಎನ್. ಕುಂಟೋಜಿ ಮಾತನಾಡಿ, ಕವಿತೆ ಪ್ರಾಸಬದ್ಧವಾಗಿರಬೇಕು. ಇತ್ತೀಚಿನ ಕವಿತೆಗಳಲ್ಲಿ ಸ್ವಾರಸ್ಯವೇ ಕಾಣುತ್ತಿಲ್ಲ. ಇಂಥಹ ಕಾವ್ಯ ಬಹುದಿನ ಉಳಿಯುವುದಿಲ್ಲ, ಆದರೆ ಖಡ್ಗಕ್ಕಿಂತಲೂ ಹರಿತವಾದ ಶಕ್ತಿ ಕಾವ್ಯಕ್ಕೆ ಇದೆ ಎಂದು ಹೇಳಿದರು.
ನಗರದಲ್ಲಿ ಪಿಸುಗುಟ್ಟುವ ಗೋಲಗುಮ್ಮಟ ಜಗತ್ ಪ್ರಸಿದ್ಧವಾದುದು. ಇಬ್ರಾಹಿಂರೋಜಾ ದಕ್ಷಿಣ ಭಾರತದ ತಾಜ್ಮಹಲ್ ಇದ್ದಹಾಗೆ. ಇಂತಹ ಇಲ್ಲಿನ ಹತ್ತು ಹಲವು ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ನೀಡಬೇಕು ಎಂದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಶಿವತನಯ ಸುಧಾಕರ, ಡಾ. ಆನಂದ ಕುಲಕರ್ಣಿ, ಬಾಬುರಾವ ಕುಲಕರ್ಣಿ, ಎಂ.ಎಫ್. ದಖನಿ, ರಾಮಚಂದ್ರ ದೀಕ್ಷಿತ, ಶಿವಕುಮಾರ ಶಿವಶಿಂಪಿ, ರಾಮಚಂದ್ರ ದೀಕ್ಷಿತ, ವಸಂತರಾವ ಕೊರ್ತಿ, ಸೋಮಶೇಖರ ಕುರ್ಲೆ, ಮುರುಗೇಶ ಸಂಗಮ, ಶಿವಾನಂದ ಹಿರೇಮಠ, ಕಲ್ಲು ಶಿವಶರಣರ, ಶರಣಬಸವರಾಜ ಇಂಡಿ, ಕರಿಯಪ್ಪ ಕರಿಗಾರ ಮತ್ತಿತರರು ಕವನ ವಾಚಿಸಿದರು.
ಈ ಪೈಕಿ ಸೋಮಶೇಖರ ಕುರ್ಲೆ ಪ್ರಥಮ ಬಹುಮಾನ ಪಡೆದರೆ, ಶಿವಾನಂದ ಹಿರೇಮಠ ದ್ವಿತೀಯ, ಶಿವಕುಮಾರ ಶಿವಶಿಂಪಿ ತೃತೀಯ ಬಹುಮಾನ ಪಡೆದರು. ಕವಿಗೋಷ್ಠಿಯಲ್ಲಿ ನಿರ್ಣಾಯಕರಾಗಿ ಪ್ರೊ. ಎಸ್.ಎಸ್. ಕನಮಡಿ, ಶಂಕರ ಕಟಗಿ, ಪ್ರಭಾವತಿ ದೇಶಪಾಂಡೆ ಭಾಗವಹಿಸಿದ್ದರು.
ಕವಯತ್ರಿ ವಿದ್ಯಾವತಿ ಅಂಕಲಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ವಾಲಿ ಸ್ವಾಗತಿಸಿದರು. ವೀರೇಶ ವಾಲಿ ನಾಡಗೀತೆ ಹಾಡಿದರು.
ಅಶೋಕ ಇನಾಮದಾರ ಪ್ರಾರ್ಥಿಸಿದರು. ರಮೇಶ ಕೋಟಿಹಾಳ ಕಾರ್ಯಕ್ರಮ ನಿರೂಪಿಸಿದರು. ಕೆ. ಸುನಂದಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.