ADVERTISEMENT

‘ಕೆಲಸ ಮಾಡಿ; ಇಲ್ಲ ಜಾಗ ಖಾಲಿ ಮಾಡಿ’

ಅಧಿಕಾರಿಗಳಿಗೆ ಸಚಿವ ಎಂ.ಬಿ. ಪಾಟೀಲ ಖಡಕ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 5:06 IST
Last Updated 9 ಡಿಸೆಂಬರ್ 2013, 5:06 IST

ವಿಜಾಪುರ: ‘ಜನಸಾಮಾನ್ಯರ ಸಮಸ್ಯೆ ಗಳಿಗೆ ಸ್ಪಂದಿಸಿ ಕೆಲಸ ಮಾಡುವುದಿದ್ದರೆ ಮಾಡಿ, ಇಲ್ಲವೇ ಜಾಗ ಖಾಲಿ ಮಾಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಹೆಬ್ಬಾಳಹಟ್ಟಿ, ನಾಗರಾಳ, ನಿಡೋಣಿ, ಕಣಮುಚನಾಳ ಮತ್ತು ಅತಾಲಟ್ಟಿ ಗ್ರಾಮಗಳಲ್ಲಿ ಭಾನುವಾರ ಜನಸ್ಪಂದನ ಸಭೆಗಳನ್ನು ನಡೆಸಿ, ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

‘ಪಡಿತರ ವ್ಯವಸ್ಥೆ ಸರಿಯಾಗಿಲ್ಲ. ಪಡಿತರ ಚೀಟಿಗಳು ಹಂಚಿಕೆಯಾಗಿಲ್ಲ. ವಸತಿ ಯೋಜನೆಗಳ ಬಿಲ್ ಮಾಡಲು ಅಕ್ರಮ ಹಣ ವಸೂಲಿ. ಅರ್ಹ ಫಲಾನುಭವಿಗಳಿಗೆ ಪಿಂಚಣಿ ದೊರೆತಿಲ್ಲ ಎಂಬ ದೂರುಗಳು ಪ್ರತಿ ಗ್ರಾಮಗಳ ಲ್ಲಿಯೂ ಕೇಳಿ ಬರುತ್ತಿವೆ. ಅಧಿಕಾರಿಗಳು ಜಡತ್ವ ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕೆಲಸ ಮಾಡಲಾಗ ದವರು ಇಲ್ಲಿಂದ ಬೇರೆಡೆಗೆ ತಾವಾ ಗಿಯೇ ಹೋಗಬಹುದು. ಇಲ್ಲವೇ ಶಿಸ್ತು ಕ್ರಮ ಎದುರಿಸಲು ಸಿದ್ಧರಾಗಬೇಕು’ ಎಂದು ಹೇಳಿದರು.

‘ಬಬಲೇಶ್ವರ ಕ್ಷೇತ್ರದ ಜನತೆಯ ಆರ್ಶೀವಾದದಿಂದ ರಾಜ್ಯದ ಜಲಸಂಪ ನ್ಮೂಲ ಸಚಿವನಾಗಿ ಕಳೆದ ಆರು ತಿಂಗಳಲ್ಲಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಇಲಾಖೆಯ ಒಳ ಮತ್ತು ಹೊರಗಿನ ಸ್ಥಿತಿಯನ್ನು ಸಂಪೂರ್ಣ ಅಭ್ಯಸಿಸಿ ಹಲವಾರು ಸುಧಾರಣೆಗಳನ್ನು ಕೈಗೊಂಡಿದ್ದೇನೆ.

ವಿವಿಧ ನೀರಾವರಿ ಯೋಜನಾ ಪ್ರದೇಶಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಚುರುಕು ಗೊಳಿಸಿದ್ದೇನೆ. ಇದೀಗ ಮತಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಜನಸ್ಪಂದನ ನಡೆಸುತ್ತೇನೆ. ಇಲ್ಲಿ ಸ್ವೀಕರಿಸುವ ಅಹವಾಲುಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿ ಗಳೇ ಅವುಗಳನ್ನು ಶೀಘ್ರವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗು ವುದು’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ಜಿಲ್ಲೆಗೆ ಭೇಟಿನೀಡಿ ಸಾರ್ವ ಜನಿಕರ ದೂರುಗಳನ್ನು ಆಲಿಸುತ್ತಿದ್ದು, ಇದು ಜನರ ಬಳಿಗೆ ಸರ್ಕಾರವನ್ನು ಕೊಂಡೊಯ್ಯುವ ನಿಜವಾದ ಸಮಸ್ಯೆ ಗಳನ್ನು ಅರಿತುಕೊಳ್ಳುವ ಉತ್ತಮ ಪ್ರಯತ್ನವಾಗಿದೆ ಎಂದು ಹೇಳಿದರು.

ನಿಡೋಣಿ ಗ್ರಾಮದಲ್ಲಿ ಪಿ.ಡಿ.ಒ ಕಬಾಡೆ ವಸತಿ ಯೋಜನೆಗಳ ಪ್ರತಿ ಮನೆಗಳ ಬಿಲ್ ಮಾಡುವಾಗ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಕುರಿತು ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಸಚಿವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್ ಜಿ.ಆರ್.ಶೀಲವಂತ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಮುಖಂಡರುಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.