ಸಿಂದಗಿ: ಪಟ್ಟಣದ ಸಾರಂಗಮಠದ ಪೀಠಾಧ್ಯಕ್ಷರಾಗಿದ್ದ ಶತಾಯುಷಿ ಲಿಂ. ಚೆನ್ನವೀರ ಸ್ವಾಮೀಜಿ 34ನೇ ಸ್ಮರಣೋತ್ಸವವನ್ನು ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ರಚನಾತ್ಮಕವಾಗಿ ಆಚರಿಸಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಶಾಖೆ ಅಧ್ಯಕ್ಷ ಅಶೋಕ ವಾರದ ಹೇಳಿದರು.
ಇಲ್ಲಿಯ ಸಾರಂಗಮಠದಲ್ಲಿ ಗುರುವಾರ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಾರಂಗಮಠದ ಪದ್ಮರಾಜ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಂಗ ಸಂಸ್ಥೆಗಳು, ಲಿಂ. ಎನ್.ಚೆನ್ನಯ್ಯಸ್ವಾಮಿ ಮತ್ತು ಲಿಂ. ಶಾರದಾದೇವಿ ಜನಕಲ್ಯಾಣ ಫೌಂಡೇಷನ್ ಹಾಗೂ ವಿಜಯಪುರದ ಬಿಎಲ್ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಮತ್ತು ಸಿಂದಗಿ ವಾರದ ಕಣ್ಣಿನ ಆಸ್ಪತ್ರೆ ಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೇತ್ರ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದ ಚಾಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸಾರಂಗಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಶಿಬಿರಕ್ಕೆ ಚಾಲನೆ ನೀಡಿದರು. ಮಠದ ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ಸಭೆಯ ಸಮ್ಮುಖ ವಹಿಸಿದ್ದರು.
76 ಜನರಿಗೆ ನೇತ್ರ ತಪಾಸಣೆ ನಡೆಯಿತು. ಅದರಲ್ಲಿ 35 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆಗಾಗಿ ವಿಜಯಪುರ ಬಿಎಲ್ಡಿಇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರಾದ ವಿಜಯಕುಮಾರ ವಾರದ, ವಾರದ ಕಣ್ಣಿನ ಆಸ್ಪತ್ರೆಯ ಮುಖ್ಯ ವೈದ್ಯರಾದ ಸುಷ್ಮಾ ವಾರದ, ಬಿಎಲ್ಡಿಇ ವೈದ್ಯರಾದ ಪೂರ್ವ ಐಹೊಳಿ, ನಿತೀಶ ಶುಭಾಂಗಿ, ಐಶ್ವರ್ಯ, ಇರ್ಬಾಸ್, ವಿಜಯಲಕ್ಷ್ಮೀ ಶಿಬಿರದ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.