ಸಿಂದಗಿ: ‘ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ, ಅವರಿಗೆ ಉತ್ತಮ ಸಂಸ್ಕಾರ ನೀಡಬೇಕು’ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಹೇಳಿದರು.
ನಗರದ ಅಂಜುಮನ್–ಎ–ಇಸ್ಲಾಂ ಶಿಕ್ಷಣ ಸಂಸ್ಥೆಯ ನ್ಯೂ ಇರಾ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಕ್ಕಳು ಮೌಲಿಕ ಗ್ರಂಥಗಳನ್ನು ಓದಬೇಕು. ಪಾಲಕರು ಮಕ್ಕಳನ್ನು ಓದಬೇಕು. ಅಂದರೆ ಅವರ ಬಗ್ಗೆ ಅಷ್ಟೊಂದು ಕಾಳಜಿ ಹೊಂದಿ ಮಕ್ಕಳ ವ್ಯಕ್ತಿತ್ವ ವಿಕಸನ ದಿಸೆಯಲ್ಲಿ ಪೂರಕ ಕಾರ್ಯ ಮಾಡಬೇಕು’ ಎಂದು ಕೇಳಿಕೊಂಡರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ ಗಣಿಹಾರ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ನಗರದ ಗಣ್ಯರಿಂದ, ಸಂಸ್ಥೆಯ ಸಿಬ್ಬಂದಿ, ದಿವಂಗತ ಐ.ಬಿ.ಅಂಗಡಿ ವಕೀಲರ ಅಭಿಮಾನಿಗಳ ಬಳಗದಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಎಸ್.ಎಂ.ಪಾಟೀಲ ಮಾತನಾಡಿದರು. ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಗಫೂರ ಮಸಳಿ, ಶಾಂತೂ ಹಿರೇಮಠ ಸಹ ಮಾತನಾಡಿದರು.
ನ್ಯೂ ಇರಾ ಶಾಲೆ ಅಧ್ಯಕ್ಷ ಮಹಿಬೂಬ ಹಸರಗುಂಡಗಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎ.ದುದನಿ, ನಿರ್ದೇಶಕ ಝಲ್ಫೀಕರ ಅಂಗಡಿ, ಪ್ರಾಚಾರ್ಯರಾದ ಎಂ.ಡಿ.ಬಳಗಾನೂರ, ಝಾಕೀರ ಅಂಗಡಿ, ಹಾಫಿಜ್ ಗಿರಗಾಂವ, ಉಪಪ್ರಾಚಾರ್ಯೆ ಎಸ್.ಎ.ದೊಡಮನಿ, ವಡಿಗೇರಿ ವೇದಿಕೆಯಲ್ಲಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಲೀಲಾ ನಾಯ್ಕ ಸ್ವಾಗತಿಸಿ ಶಾಲೆ ನಡೆದು ಬಂದ ದಾರಿ ವಿವರಿಸಿದರು. ಎಂ.ಜಿ.ಲೇಖಾ, ಪ್ರಭುಲಿಂಗ ಲೋಣಿ ನಿರೂಪಿಸಿದರು. ಗಾಯತ್ರಿ ನಾಯ್ಕ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.