ವಿಜಯಪುರ: ‘ಜಿಲ್ಲೆಯಲ್ಲಿ ನಿರ್ಮಿಸಿರುವ ಕಾಲುವೆಗಳಿಗೆ ನೀರು ಹರಿಸಿ, ಆ ಕಾಲುವೆಗಳಿಂದ ಜಿಲ್ಲೆಯ ವಿವಿಧ 200 ಹಳ್ಳಗಳಿಗೆ ನೀರು ಹರಿಸುವ ₹59 ಕೋಟಿ ಮೊತ್ತದ ಯೋಜನೆಗೆ ಸರ್ಕಾರ ಅನೋಮೊದನೆ ನೀಡಿದೆ’ ಎಂದು ಎಂದು ಶಾಸಕ ಎಂ.ಬಿ.ಪಾಟೀಲ ತಿಳಿಸಿದರು.
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ನಾಗರಾಳದಲ್ಲಿ ನಾಗರಾಳ-ನಿಡೋಣಿ-ಹೆಬ್ಬಾಳಟ್ಟಿ-ಅರ್ಜುಣಗಿವರೆಗಿನ ₹4.50 ಕೋಟಿ ಮೊತ್ತದ 7 ಕಿ.ಮೀ ರಸ್ತೆ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಜಿಲ್ಲೆಯನ್ನು ನೀರಾವರಿಗೆ ಒಳಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆಲಮಟ್ಟಿ ಅಣೆಕಟ್ಟು ಎತ್ತರಿಸಲು ಕಾನೂನಾತ್ಮಕ ತೊಂದರೆಗಳಿಂದ ಜಿಲ್ಲೆ ವಂಚಿತವಾಗಬಾರದು. ಆ ಕಾರಣಕ್ಕಾಗಿ ಈಗಾಗಲೇ ನಿರ್ಮಿಸಿದ ಕಾಲುವೆ ಜಾಲದ ಮೂಲಕ ಹಳ್ಳಗಳಿಗೆ ನೀರು ಹರಿಸುವ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.
‘ಪ್ರತಿ ಹಳ್ಳಗಳಿಗೆ 500 ಮೀ.ಗೆ ಒಂದು ಚೆಕ್ ಡ್ಯಾಂ, ಒಂದು ಇಂಗು ಬಾವಿಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಹಳ್ಳಗಳಲ್ಲಿ ವೇಗವಾಗಿ ನೀರು ಹರಿಯುತ್ತದೆ ಮತ್ತು ಹೆಚ್ಚಿನ ನೀರನ್ನು ಭೂಮಿಯಲ್ಲಿ ಇಂಗಿಸುವ ಮೂಲಕ ಜಿಲ್ಲೆಯಾದ್ಯಂತ ಅಂತರ್ಜಲವನ್ನು ಹೆಚ್ಚಿಸುವ ವಿನೂತನ ಪರಿಕಲ್ಪನೆ ಈ ಯೋಜನೆಯಲ್ಲಿದೆ. ಅಲ್ಲದೆ, ತಿಡಗುಂದಿ ಅಕ್ವಾಡೆಕ್ಟ್ ಮೂಲಕ ಇಂಡಿ ತಾಲ್ಲೂಕಿನ 15-20 ಕೆರೆಗಳನ್ನು ತುಂಬಿಸಲಾಗುವುದು’ ಎಂದರು.
₹4 ಕೋಟಿ ವೆಚ್ಚದ ನಿಡೋಣಿ-ಧನ್ಯಾಳವರೆಗಿನ 7 ಕಿ.ಮೀ ರಸ್ತೆ ಕಾಮಗಾರಿ, ₹5 ಕೋಟಿ ವೆಚ್ಚದ ಕೋಟ್ಯಾಳ-ದಾಶ್ಯಾಳ-ನಿಡೋಣಿವರೆಗಿನ 6 ಕಿ.ಮೀ ರಸ್ತೆ, ₹92 ಲಕ್ಷ ವೆಚ್ಚದ ಹೆಬ್ಬಾಳಟ್ಟಿ-ಅರ್ಜುಣಗಿ ವರೆಗಿನ 4 ಕಿ.ಮೀ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಆಯಾ ಗ್ರಾಮಗಳಲ್ಲಿ ಚಾಲನೆ ನೀಡಿದರು.
ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ, ತಾಜಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಾಮುಲು ಚವ್ಹಾಣ, ಆರ್.ಜಿ.ಯರನಾಳ, ಮುಖಂಡರಾದ ಸಾಹೇಬಗೌಡ ಪಾಟೀಲ, ಎಸ್.ವಿ.ಪಾಟೀಲ, ಬಿ.ಒ.ಪಾಟೀಲ, ಆರ್.ವಿ.ಜಾಧವ, ನಿಂಗನಗೌಡ ಬಿರಾದಾರ, ಬಾಪುಗೌಡ ಬಿರಾದಾರ, ಮೊಹಮ್ಮದ್ ಹನೀಫ್ ಜಮಾದಾರ, ಮುಕ್ತಾಂಕರ ಬೆನಕಟ್ಟಿ, ಸದಾಶಿವ ತೊದಲಬಾಗಿ, ನಾಗಪ್ಪ ಬೂದಿ, ಮಲ್ಲನಗೌಡ ಪಾಟೀಲ, ನಾಗರಾಜ ಲಂಬು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.