ವಿಜಯಪುರ: ರಾಜ್ಯದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮಾ ಹೇಳಿದರು.
ಆಮ್ ಆದ್ಮಿ ಪಕ್ಷವು ಜಿಲ್ಲೆಯ ಸಮಸ್ಯೆಗಳನ್ನು ಅರಿಯಲು ಹಮ್ಮಿಕೊಂಡಿರುವ ಸರ್ವೆ ಫಾರ್ಮ್ (ಸಮೀಕ್ಷೆ ಫಾರ್ಮ್)ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ದೆಹಲಿ ಸರ್ಕಾರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸಿ, ಜನಮೆಚ್ಚುಗೆಗೆ ಪಾತ್ರವಾಗಿದೆ. ಪಂಜಾಬಿನಲ್ಲಿಯೂ ಕೂಡ 117ರಲ್ಲಿ 92 ಸೀಟು ಗಳಿಸಿ ಅಧಿಕಾರಕ್ಕೆ ಬಂದು ಭ್ರಷ್ಟಾಚಾರ ಸಹಿಸದೆ ತನ್ನದೇ ಆರೋಗ್ಯ ಸಚಿವರನ್ನು ಕೆಳಗಿಳಿಸಿ ಅವರನ್ನು ಜೈಲಿಗೆ ಹಾಕಿದೆ. ದೇಶದ ರಾಜಕೀಯ ಇತಿಹಾಸದಲ್ಲಿ ಯಾವುದೇ ಸರ್ಕಾರ ಈ ತರಹದ ನಿರ್ಣಯಗಳನ್ನು ತೆಗೆದುಕೊಂಡ ಉದಾಹರಣೆ ಇಲ್ಲ ಎಂದರು.
ಕರ್ನಾಟಕದ ಜನರು ಕೂಡ ಆಮ್ ಆದ್ಮಿ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಪ್ರತಿನಿತ್ಯ ಸಾವಿರಾರು ಜನರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಜಿ.ಪಂ. ಮತ್ತು ತಾ.ಪಂ. ಕ್ಷೇತ್ರದ ಆಕಾಂಕ್ಷಿಗಳು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲೆಯ ವಿವಿಧ ಕ್ಷೇತ್ರಗಳಿಂದ ಬಂದಿದ್ದ ಆಕಾಂಕ್ಷಿಗಳ ಜೊತೆಗೆ ಪಕ್ಷದ ಗೆಲುವಿಗಾಗಿ ಶ್ರಮಿಸುವ ಕುರಿತು ಚರ್ಚಿಸಲಾಯಿತು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರೋಹನ್ ಐನಾಪುರ, ಮುಖಂಡರಾದ ಎಂ.ಜಿ.ಪಾಟೀಲ್, ನಾರಾಯಣ ಸಂಸ್ಥಾನಿಕ, ಡಾ.ವಿನೋದ್ ಜಾಧವ್, ಧನರಾಜ್ ಬಸವಂತಿ, ಭೋಗೇಶ್ ಸೋಲಾಪುರ, ನಿಹಾದ್ ಅಹಮದ್ ಗೋಡಿಹಾಳ, ಮಲ್ಲು ಶಿರಶ್ಯಾಡ, ರದ್ದೇವಾಡಗಿ, ಮಲ್ಲಿಕಾರ್ಜುನ ಕೆಂಗನಾಳ, ಆಸೀಫ್ ಹೆರ್ಕಲ್, ಶಿವು ಕೊಳ್ಳಾರಿ, ಬಾಬು ಬಿಜಾಪುರ, ಶಬ್ಬೀರ ಪಟೇಲ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.