ವಿಜಯಪುರ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಪಂಪ್ಗಳ ದುರಸ್ತಿಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.
ಜಿಲ್ಲೆಯ ಸಿಂದಗಿ ಮತ್ತು ಇಂಡಿ ತಾಲ್ಲೂಕಿನ ರೈತರ ಹೊಲಗಳಿಗೆ ನೀರುಣಿಸುವ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಆರೂ ಪಂಪ್ಗಳು 2015 ರಿಂದ ದುರಸ್ತಿಯಾಗದೆ ನಿಷ್ಕ್ರಿಯಗೊಂಡು ವಿಶೇಷವಾಗಿ ಕಾಲುವೆ ಕೊನೆ ಅಂಚಿನ ಭಾಗಕ್ಕೆ ಹಾಗೂ ಕಾಲುವೆಯ ಬಹುತೇಕ ಪ್ರದೇಶಕ್ಕೆ ನೀರು ಪೂರೈಕೆ ಆಗದೆ ವ್ಯತ್ಯಯ ಉಂಟಾಗಿತ್ತು. ಈಗ ಆರು ಪಂಪ್ಗಳ ಪೈಕಿ ನಾಲ್ಕು ಪಂಪ್ಗಳು ದುರಸ್ತಿಯಾಗಿ ಕಾರ್ಯಾರಂಭ ಮಾಡಿವೆ. ಇನ್ನೂ ಒಂದು ಪಂಪ್ ಸೆಪ್ಟೆಂಬರ್ 6ರಂದು ದುರಸ್ತಿಯಾಗಿ ಯೋಜನಾ ಪ್ರದೇಶ ತಲುಪಲಿದ್ದು, ಸೆಪ್ಟೆಂಬರ್ 7ರಂದು ಪಂಪ್ ಅನ್ನು ಕೂಡಾ ಚಾಲನೆಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ಪಂಪ್ಗಳನ್ನು ತ್ವರಿತಗತಿಯಲ್ಲಿ ಕೇವಲ ಆರು ತಿಂಗಳಲ್ಲಿ ದುರಸ್ತಿ ಮಾಡಿಸಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕಾರ್ಯಾರಂಭ ಮಾಡಿಸಲಾಗಿದೆ. ಈ ಪಂಪ್ಗಳನ್ನು ದುರಸ್ತಿ ಮಾಡಿದ ಕಂಪನಿಗೆ ಮುಂದಿನ ಐದು ವರ್ಷಗಳ ನಿರ್ವಹಣೆಯ ಹೊಣೆಗಾರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಕಂಪನಿಯು ಯೋಜನಾ ಪ್ರದೇಶದಲ್ಲಿ ತನ್ನ ಒಬ್ಬರು ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರನ್ನು ಒದಗಿಸಿ ಪಂಪ್ಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಜವಾಬ್ದಾರಿ ವಹಿಸಿಕೊಂಡಿದೆ. ಈಗ ಮೂರು ಪಂಪ್ಗಳು ಕಾರ್ಯ ಆರಂಭ ಮಾಡಿದ್ದು, ಇಂದಿನ 15 ದಿನಗಳಲ್ಲಿ ಎಲ್ಲಾ ಆರು ಪಂಪ್ಗಳು ಕಾರ್ಯ ಆರಂಭ ಮಾಡುವಂತೆ ಕ್ರಮ ಕೈಗೊಳ್ಳಲು ಸಚಿವರು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾಗಿ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.