ADVERTISEMENT

ತಳವಾರ ಸಮಾಜ ಎಸ್.ಟಿ ಸೇರ್ಪಡೆ: ಕಾಂಗ್ರೆಸ್‌ ಕೊಡುಗೆ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 14:40 IST
Last Updated 28 ನವೆಂಬರ್ 2022, 14:40 IST
ಬಬಲೇಶ್ವರದಲ್ಲಿ ನಾನಾ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪ್ರತಿಯನ್ನು ಶಾಸಕ ಎಂ.ಬಿ. ಪಾಟೀಲ ಸೋಮವಾರ ವಿತರಿಸಿದರು
ಬಬಲೇಶ್ವರದಲ್ಲಿ ನಾನಾ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪ್ರತಿಯನ್ನು ಶಾಸಕ ಎಂ.ಬಿ. ಪಾಟೀಲ ಸೋಮವಾರ ವಿತರಿಸಿದರು   

ವಿಜಯಪುರ: 2014ರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ತಳವಾರ ಸಮುದಾಯದ ಮುಖಂಡರು ನನ್ನ ಬಳಿಗೆ ಬಂದು ಮನವಿ ಮಾಡಿದ್ದರಿಂದ ಈ ಸಮುದಾಯವನ್ನು ಎಸ್.ಟಿ. ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಬಬಲೇಶ್ವರದಲ್ಲಿ ನಾನಾ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪ್ರತಿ ಮತ್ತು ಕಾರ್ಮಿಕರಿಗೆ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ತಳವಾರ ಸಮಾಜದ ಮುಖಂಡ ರವಿಗೌಡ ಪಾಟೀಲ ಧೂಳಖೇಡ ಮತ್ತು ಇತರರು ನನ್ನ ಬಳಿ ಬಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಅವರ ಗಮನಕ್ಕೆ ತಂದು ಕೇವಲ ಒಂದು ವಾರದಲ್ಲಿ ಸಚಿವ ಸಂಪುಟದಲ್ಲಿ ಅದಕ್ಕೆ ಒಪ್ಪಿಗೆ ಸೂಚಿಸಿ, ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಹಾಲಿ ಸರ್ಕಾರ ಎರಡು ವರ್ಷ ಈ ಸಮುದಾಯದ ಜನರನ್ನು ಸತಾಯಿಸಿ, ಈಗ ಎಸ್. ಟಿ. ಮೀಸಲಾತಿ ಪಟ್ಟಿಗೆ ಸೇರಿಸಿದೆ. ಇದು ಬಹಳ ಜನರಿಗೆ ಗೊತ್ತಿಲ್ಲ. ಅಂದು ನಾವು ಕೇಂದ್ರಕ್ಕೆ ಶಿಫಾರಸು ಮಾಡಿರದಿದ್ದರೆ ಇಂದು ಈ ಮೀಸಲಾತಿ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು.

ADVERTISEMENT

ಬಬಲೇಶ್ವರ ಮತಕ್ಷೇತ್ರ ಮತ್ತು ವಿಜಯಪುರ ಜಿಲ್ಲೆ ಈ ಹಿಂದೆ ಹೊಂದಿದ್ದ ಬರಪೀಡಿತ ಮತ್ತು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯನ್ನು ಅಳಸಿ ಹಾಕುವ ಕೆಲಸ ಮಾಡಿದ್ದೇವೆ. ನೀರಾವರಿಯ ಫಲವಾಗಿ ಈಗ ರೈತರು ಆರ್ಥಿಕವಾಗಿ ಸ್ಥಿತಿವಂತರಾಗಿದ್ದು, ಉತ್ತಮ ಬೆಳೆ ಬೆಳೆಯುತ್ತಿದ್ದಾರೆ ಎಂದರು.

ಒಂದು ಎಕರೆಗೆ ₹2 ಲಕ್ಷ ಬೆಲೆಯಿದ್ದ ಭೂಮಿಯ ಬೆಲೆ ಈಗ ಪ್ರತಿ ಎಕರೆಗೆ ₹ 20 ಲಕ್ಷಕ್ಕೆ ತಲುಪಿದೆ. ಶಾಸಕನಾಗಿ ನಾನು ಮತ್ತು ನಮ್ಮ ಅಂದಿನ ಸರ್ಕಾರ ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಜನರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಸಾಮಾಜಿಕ ಭದ್ರತೆ ಯೋಜನೆಯಡಿ 250 ಜನರಿಗೆ ಮಂಜೂರಾದ ಪಿಂಚಣಿ ಆದೇಶ ಪತ್ರವನ್ನು ವಿತರಿಸಲಾಯಿತು. ಅಲ್ಲದೇ, ಕಾರ್ಮಿಕ ಇಲಾಖೆ ವತಿಯಿಂದ 250 ಜನರಿಗೆ ಕಿಟ್ ವಿತರಿಸಲಾಯಿತು.

ವಿ. ಎಸ್. ಪಾಟೀಲ, ವಿ. ಎನ್. ಬಿರಾದಾರ, ಮಲ್ಲಪ್ಪ ಕೆಂಪವಾಡ, ಸೋಮನಾಥ ಕಳ್ಳಿಮನಿ, ಧರ್ಮರಾಜ ಬಿಳೂರ, ಪ್ರಕಾಶ ಸೊನ್ನದ, ಮಹೇಶಗೌಡ ಪಾಟೀಲ, ಅಶೋಕ ಕಾಖಂಡಕಿ, ಆನಂದ ಬೂದಿಹಾಳ, ಹರೀಶ ಕುಲಕರ್ಣಿ, ವಿದ್ಯಾರಾಣಿ ತುಂಗಳ, ಬಿ. ಜಿ. ಬಿಳೂರ, ಕಾವ್ಯಾ ತಟಗಾರ, ನಿಂಗನಗೌಡ ಬಿರಾದಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.