
ವಿಜಯಪುರ: ಎಐ ತಂತ್ರಜ್ಞಾನದಿಂದ ಜಗತ್ತು ಹೊಸ ದಿಕ್ಕಿನ್ನತ್ತ ಸಾಗಿದೆ. ಇದರಿಂದ ಉಪಯೋಗವೂ ಅಧಿಕ, ಅಪಾಯಗಳು ಅಧಿಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರ ಹೊರವಲಯದ ಇಟ್ಟಂಗಿಹಾಳ - ಜಾಲಗೇರಿ ರಸ್ತೆಯಲ್ಲಿ ನಿರ್ಮಾಣವಾಗಿರುವ ವೇದ ಅಂತರರಾಷ್ಟ್ರೀಯ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
ಕೃತಕ ಬುದ್ಧಿಮತ್ತೆ ವೈದ್ಯಕೀಯ ಕ್ಷೇತ್ರಕ್ಕೂ ಕಾಲಿಟ್ಟಿದೆ, ಚೀನಾದಲ್ಲಿರುವ ಮೊಬೈಲ್ ಕಂಪನಿಯಲ್ಲಿ ಉದ್ಯೋಗಿಗಳೇ ಇಲ್ಲ, ಎಲ್ಲವನ್ನೂ ಎಐ ನಿರ್ವಹಿಸುತ್ತಿದೆ. ಎ.ಐ.ಗೆ ಯಾವ ಹವಾನಿಯಂತ್ರಿತ ಸೌಲಭ್ಯ ಬೇಕಾಗಿಲ್ಲ, ಕೆಲಸ ಪರಿಣಾಮಕಾರಿಯಾಗಿ, ವೇಗವಾಗಿ ಆಗುತ್ತದೆ. ಆದರೆ, ಇದರಿಂದ ಅನೇಕ ಉದ್ಯೋಗಗಳಿಗೆ ಕತ್ತರಿ ಬೀಳುವ ಅಪಾಯ ಎದುರಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಯರನಾಳ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ, ‘ಆಸರೆ’ ಯೋಜನೆ ಮೂಲಕ ಬಡ ವರ್ಗದ ವಿದ್ಯಾರ್ಥಿಗಳಿಗೆ ವೇದ ಅಕಾಡೆಮಿ ಶೈಕ್ಷಣಿಕ ನೆರವು ನೀಡುತ್ತಿರುವುದು ಅರ್ಥಪೂರ್ಣವಾದ ಕಾರ್ಯ, ಈ ರೀತಿಯ ಪವಿತ್ರ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಶೇಗುಣಸಿ ಡಾ.ಮಹಾಂತ ಪ್ರಭು ಸ್ವಾಮೀಜಿ, ಪ್ರಸ್ತುತ ಎಐ ಅಬ್ಬರ ಅಧಿಕವಾಗಿದೆ, ವೈದ್ಯರು, ಎಂಜಿನಿಯರ್ ಅಷ್ಟೇ ಅಲ್ಲ ಸ್ವಾಮೀಜಿಗಳಿಗೂ ಕೆಲಸವಿಲ್ಲದಂತಾಗಿದೆ, ಗೊಂಬೆ ಪ್ರವಚನ ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಶ್ರೀ ರತ್ನ ಪ್ರಶಸ್ತಿ ಪ್ರದಾನ:
ಶಂಕರಗೌಡ ಪಾಟೀಲ ಯರನಾಳ, ಶಿಕ್ಷಣ ತಜ್ಞ ಬಸವರಾಜ ಕುಂಬಾರ, ಸಾಹಿತಿ ಮಹಾದೇವ ಬಸರಕೋಡ, ಶಿವಾನಂದ ಕೆಲೂರ ಅವರಿಗೆ 2026ನೇ ಸಾಲಿನ ‘ಶ್ರೀರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ವೇದ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ.ಶಿವಾನಂದ ಕೆಲೂರ, ವಿಶ್ರಾಂತ ಪೊಲೀಸ್ ಉಪಾಧೀಕ್ಷಕ ಬಿ.ಆರ್.ಚೌಕಿಮಠ, ಡಾ.ಬಾಬುರಾಜೇಂದ್ರ ನಾಯಿಕ, ಲೋಹಗಾಂವ ಗ್ರಾ.ಪಂ ಅಧ್ಯಕ್ಷೆ ಕಮಲಾಬಾಯಿ ಲಮಾಣಿ, ಮಾಜಿ ಅಧ್ಯಕ್ಷ ರಾಜುಗೌಡ ಬಿರಾದಾರ, ಸಂಸ್ಥೆಯ ಉಪಾಧ್ಯಕ್ಷ ದಯಾನಂದ ಕೆಲೂರ, ಭುವನೇಶ್ವರಿ ಮೇಲಿನಮಠ, ಎನ್.ಜಿ.ಯರನಾಳ, ಮಹಾಂತೇಶ ಬಿರದಾರ, ನಾನಾಗೌಡ ಬಿರಾದಾರ, ಪ್ರೊ.ವೇಂಕಟೇಶ, ದದ್ದು ತಿವಾರಿ, ಬಿ.ಆರ್. ನಂದ್ಯಾಗೂಳ, ನಾಗಪ್ಪ ಗುಗರಿ, ರವಿಕುಮಾರ ಚೌದರಿ, ಶರಣಪ್ಪ ಯಕ್ಕುಂಡಿ, ಸುಧೀರ ಚಿಂಚಲಿ, ಪ್ರಾಚಾರ್ಯರಾದ ಸುನೀಲ ಬಿ.ಎಂ. ಮಧ್ವಪ್ರಸಾದ ಜಿ.ಕೆ, ರಶ್ಮಿ ಕವಟಗಿಮಠ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.