ADVERTISEMENT

ಆಲಮಟ್ಟಿ: 4 ಲಕ್ಷ ಕ್ಯುಸೆಕ್ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 15:50 IST
Last Updated 28 ಜುಲೈ 2021, 15:50 IST
ನಿಡಗುಂದಿ ತಾಲ್ಲೂಕಿನ ಅರಳದಿನ್ನಿ ಗ್ರಾಮದ ಜಲಾವೃತ ಪ್ರದೇಶಕ್ಕೆ ತಹಶೀಲ್ದಾರ್ ಸತೀಶ ಕೂಡಲಗಿ ಭೇಟಿ ಪರಿಶೀಲನೆ ನಡೆಸಿದರು
ನಿಡಗುಂದಿ ತಾಲ್ಲೂಕಿನ ಅರಳದಿನ್ನಿ ಗ್ರಾಮದ ಜಲಾವೃತ ಪ್ರದೇಶಕ್ಕೆ ತಹಶೀಲ್ದಾರ್ ಸತೀಶ ಕೂಡಲಗಿ ಭೇಟಿ ಪರಿಶೀಲನೆ ನಡೆಸಿದರು   

ಆಲಮಟ್ಟಿ(ವಿಜಯಪುರ): ಆಲಮಟ್ಟಿ ಜಲಾಶಯದ ಹೊರಹರಿವು ಹೆಚ್ಚಿಸಲಾಗಿದ್ದು, ಬುಧವಾರ 4 ಲಕ್ಷ ಕ್ಯುಸೆಕ್ ನೀರನ್ನು ಹೊರಗೆ ಹರಿಸಲಾಯಿತು.

ಕೃಷ್ಣಾ ನದಿ ತಳಪಾತ್ರದಲ್ಲಿ ಬೆಳೆಯ ಜಲಾವೃತದ ಆತಂಕ ಎದುರಾಗಿದೆ. ಮಂಗಳವಾರ ತಡರಾತ್ರಿಯಿಂದಲೇ 3.5 ಲಕ್ಷ ಕ್ಯುಸೆಕ್ ಇದ್ದ ಹೊರಹರಿವು 3.80 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗಿತ್ತು. ಇದರಿಂದ ಅರಳದಿನ್ನಿ, ಯಲಗೂರ, ಯಲ್ಲಮ್ಮನ ಬೂದಿಹಾಳ, ಮಸೂತಿ, ಕಾಶೀನಕುಂಟಿ ಗ್ರಾಮದ ನೂರಾರು ಎಕರೆಯಲ್ಲಿ ಬೆಳೆದ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ. ಬೆಳೆಹಾನಿ ಪ್ರಮಾಣ ಗುರುವಾರ ಇನ್ನಷ್ಟು ಹೆಚ್ಚಾಗಲಿದೆ.

ಸದ್ಯ ಜಲಾಶಯಕ್ಕೆ 4.4 ಲಕ್ಷ ಕ್ಯುಸೆಕ್ ಒಳಹರಿವು ಇದ್ದು ರಾತ್ರಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ADVERTISEMENT

‘ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಕೂಡಲಸಂಗಮದ ಬಳಿ‌ ಮಲಪ್ರಭಾ ನದಿಯ ಹರಿವು ಹೆಚ್ಚಿದ್ದರಿಂದ ನೀರು ಹಿಂದಕ್ಕೆ ಸರಿದು ಆಲಮಟ್ಟಿ ವರೆಗೂ ನಿಲ್ಲುತ್ತಿದೆ.
ಇದರಿಂದ ಕೃಷ್ಣಾ ತೀರದ ಜಮೀನುಗಳಿಗೆ ನೀರು ನುಗ್ಗುತ್ತಿದೆ’ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದರು.

100 ಎಕರೆ ಜಲಾವೃತ: ತಾಲ್ಲೂಕಿನ ಕೃಷ್ಣಾ ತೀರದ 100ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು, ಬಾಳೆ, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳು ಜಲಾವೃತಗೊಂಡಿವೆ. ಅರಳದಿನ್ನಿ ಗ್ರಾಮದಲ್ಲಿ 60ಕ್ಕೂ ಹೆಚ್ಚು ಎಕರೆಯಲ್ಲಿ ನೀರು ನಿಂತಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜಲಾವೃತ ಪ್ರದೇಶಕ್ಕೆ ನಿಡಗುಂದಿ ತಹಶೀಲ್ದಾರ್ ಸತೀಶ ಕೂಡಲಗಿ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕೃಷ್ಣಾ ತೀರದ ಗ್ರಾಮದಲ್ಲಿ ಡಂಗೂರ ಸಾರಲಾಗಿದ್ದು, ತೀವ್ರ ಕಟ್ಟೆಚ್ಚರದಿಂದ ಇರಲು ಗ್ರಾಮ ಲೆಕ್ಕಾಧಿಕಾರಿಗಳಿಗೂ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು. ಪಿಎಸ್‌ಐ ಚಂದ್ರಶೇಖರ ಹೆರಕಲ್, ಗ್ರಾಮ ಲೆಕ್ಕಾಧಿಕಾರಿ ಟಿ.ಬಿ.ಚವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.