ಶ್ರೀಗಂಧ ಮರ
ಆಲಮಟ್ಟಿ: ಇಲ್ಲಿನ ವಿವಿಧ ಉದ್ಯಾನಗಳಲ್ಲಿ ಬೆಳೆದಿರುವ ಶ್ರೀಗಂಧದ ಮರಗಳನ್ನು ದುಷ್ಕರ್ಮಿಗಳು ಕೆಲ ವರ್ಷಗಳಿಂದ ಕಡಿದುಕೊಂಡು ಹೋಗುತ್ತಿರುವುದನ್ನು ತಡೆಯಲು ಭದ್ರತಾ ಸಿಬ್ಬಂದಿವೈಫಲ್ಯ ಎದ್ದು ಕಾಣುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ)ತಾಲ್ಲೂಕು ಘಟಕದ ಅಧ್ಯಕ್ಷ ತಿರುಪತಿ ಬಂಡಿವಡ್ಡರ ಇಲ್ಲಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲಮಟ್ಟಿಯಲ್ಲಿ ಜಲಾಶಯ ಹಾಗೂ ವಿವಿಧ ಉದ್ಯಾನಗಳಿವೆ. ಕಳೆದ 20 ವರ್ಷಗಳಿಂದಲೂ ಹಲವಾರು ಶ್ರೀಗಂಧ ಮರಗಳನ್ನು ಬೆಳೆಸಲಾಗಿದೆ. ಅವು ಈಗ ದೊಡ್ಡದಾಗಿವೆ. ಆಲಮಟ್ಟಿ ಸುತ್ತಮುತ್ತ ಸಾಕಷ್ಟು ಭದ್ರತೆಯಿದೆ. ಆದರೂ ಶ್ರೀಗಂಧ ಮರಗಳನ್ನು ಕತ್ತರಿಸಿ ಒಯ್ಯುವುದು ಸಾಮಾನ್ಯವಾಗಿದೆ.
ಕಳವಿನ ಬಗ್ಗೆ ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದರೂ ಕಳ್ಳರು ಮಾತ್ರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶ್ರೀಗಂಧದ ಮರಗಳ್ಳರನ್ನು ಹಿಡಿಯಲೇಬೇಕು ಎಂದು ಪಣತೊಟ್ಟಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ನಿವೃತ್ತ ಸೈನಿಕರನ್ನೊಳಗೊಂಡ ತಂಡಗಳನ್ನು ರಚಿಸಿಕೊಂಡು ಇಡೀ ರಾತ್ರಿ ಗಸ್ತು ತಿರುಗುತ್ತಾರೆ. ಹಗಲಿನಲ್ಲಿ ದಿನಗೂಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಾರಲ್ಲದೇ ಪ್ರವಾಸಿಗರು ಉದ್ಯಾನಗಳನ್ನು ವೀಕ್ಷಿಸಲು ಆಗಮಿಸುತ್ತಾರೆ.
ಇಲ್ಲಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಭದ್ರತಾ ಪಡೆ, ನಾಗರಿಕ ಪೊಲೀಸ್, ಅರಣ್ಯ ಇಲಾಖೆಗಳ ಬಿಗಿಭದ್ರತೆಯ ನಡುವೆ ವರ್ಷದಲ್ಲಿ ಎರಡು– ಮೂರು ಬಾರಿ ಮರಗಳ್ಳರು ಮಾತ್ರ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದಾರೆ. ಇಲ್ಲಿನ ಉದ್ಯಾನಗಳ ರಕ್ಷಣೆಗಾಗಿ ಕಾಂಪೌಂಡ್, ತಂತಿ ಬೇಲಿಯನ್ನು ನಿರ್ಮಿಸಿದ್ದಾರೆ.
ಕಾನೂನಿನ ಅಡಿಯಲ್ಲಿ ಕಳ್ಳರನ್ನು ಬಂಧಿಸುವುದರಲ್ಲಿ ವಿಫಲವಾಗುತ್ತಿರುವದು ನಾಚಿಕೆಗೇಡಿನ ಸಂಗತಿ ಎಂದರು.
ನಾಗರಾಜ ದೇವಕರ, ಶಿವಪ್ಪ ಬೇನಮಟ್ಟಿ, ಗುರುರಾಜ ವಡ್ಡರ, ರಮೇಶ ಹುಲ್ಲೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.