ಮುದ್ದೇಬಿಹಾಳ: ಇತ್ತೀಚೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ ಕಿಶೋರ ಕೋರ್ಟ್ ಹಾಲ್ನಲ್ಲಿಯೇ ಶೂ ಎಸೆದು ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈವರೆಗೂ ಪ್ರತಿಕ್ರಿಯೆ ನೀಡದಿರುವುದು ಏತಕ್ಕಾಗಿ ಎಂದು ಮಾನವ ಬಂಧುತ್ವ ವೇದಿಕೆ ಸಂಚಾಲಕ ಎಸ್.ಎಂ.ನೆರಬೆಂಚಿ ಪ್ರಶ್ನಿಸಿದರು.
ಪ್ರಕರಣವನ್ನು ಖಂಡಿಸಿ ಶನಿವಾರ ಮುದ್ದೇಬಿಹಾಳ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಹ ಸಂಚಾಲಕ ಆರ್.ಎನ್.ನಾಯಕ ಮಾತನಾಡಿ, ಇಂತಹ ಘಟನೆಗಳು ಮೇಲ್ವರ್ಗದವರು ಕೆಳವರ್ಗದವರನ್ನು ಕಾಣುವ ಸಂಸ್ಕೃತಿಯನ್ನು ಬಿಂಬಿಸಿದೆ. ಅಂಬೇಡ್ಕರ್ ಅವರ ಸಂವಿಧಾನದಿಂದಲೇ ಆತನಿಗೆ ವಕೀಲಿಕೆ ಪದವಿ ಸಿಕ್ಕಿದ್ದು ಎಂಬುದನ್ನು ಮರೆತು ಅನಾಗರಿಕನಂತೆ ವರ್ತಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮುಖಂಡರಾದ ವಕೀಲ ಶ್ರೀನಾಥ ಪೂಜಾರಿ, ಚೆನ್ನು ಕಟ್ಟಿಮನಿ, ಪ್ರಭುಗೌಡ ಪಾಟೀಲ, ವೈ.ಎಚ್. ವಿಜಯಕರ, ಹರೀಶ ನಾಟಿಕಾರ ಮಾತನಾಡಿದರು.
ಪ್ರಮುಖರಾದ ಎ.ಆರ್.ಮುಲ್ಲಾ, ಬಿ.ಎಸ್ ಮೇಟಿ,ನಾಗೇಶ ಭಜಂತ್ರಿ, ಅಕ್ಷಯ ಅಜಮನಿ, ಪ್ರಕಾಶ ಚಲವಾದಿ, ಆನಂದ ಮುದೂರ, ಪ್ರಶಾಂತ ಕಾಳೆ, ಹುಸೇನ್ ಮುಲ್ಲಾ, ಪ್ರಗತಿಪರ ಚಿಂತಕರಾದ ಬಿ.ಎಚ್. ಹುಡೇದ, ಎಸ್. ಎಸ್. ಸೂಳಿಭಾವಿ,ಎಸ್.ಎಸ್. ತೋಟದ, ರೇಣುಕಾ ಕಂಗಳ ಪಾಲ್ಗೊಂಡಿದ್ದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ತಹಶೀಲ್ದಾರ್ ಕೀರ್ತಿ ಚಾಲಕ ಮನವಿ ಪತ್ರ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.