ADVERTISEMENT

ಮುದ್ದೇಬಿಹಾಳ: ಅಂಜುಮನ್ ಸಂಸ್ಥೆ ಅವ್ಯವಹಾರ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 4:23 IST
Last Updated 5 ಜನವರಿ 2026, 4:23 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಮುದ್ದೇಬಿಹಾಳ: ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿಯ 2018ರ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಕಮಿಟಿ ಆಸ್ತಿ ಹಾಗೂ ಹಣಕಾಸಿನ ಎಲ್ಲ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಹಿರಿಯ ವಕೀಲ ಎನ್.ಆರ್.ಮೊಕಾಶಿ ಇಲ್ಲಿ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಜುಮನ್ ಕಮಿಟಿಯ ಹೆಸರಿನ ಅಂಗಡಿಗಳನ್ನು ಒಬ್ಬೊಬ್ಬ ಸದಸ್ಯರು ಎರಡ್ಮೂರು ಅಂಗಡಿಗಳನ್ನು ಪಡೆದುಕೊಂಡು ಬೇರೆಯವರಿಗೆ ಹೆಚ್ಚಿನ ಬಾಡಿಗೆಗೆ ಕೊಟ್ಟಿದ್ದಾರೆ. ಆಡಳಿತಾಧಿಕಾರಿ ನೇಮಕವಾಗಿದ್ದರೂ ಅವರು ಸಂಸ್ಥೆಯ ವ್ಯವಹಾರಗಳನ್ನು ಪಾರದರ್ಶಕವಾಗಿ ನಿಭಾಯಿಸುವುದರಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಕಮಿಟಿ ಅಡಿಯಲ್ಲಿ ಅನುದಾನಿತ ಪ್ರೌಢಶಾಲೆ, ಐಟಿಐ ಕಾಲೇಜುಗಳಿದ್ದರೂ ಅಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಸಮಾಜದ ಮಕ್ಕಳು ಇಲ್ಲ. ಗುಣಮಟ್ಟದ ಶಿಕ್ಷಣ ದೊರೆಯದ ಕಾರಣ ಬೇರೆ ಕಡೆ ಖಾಸಗಿಯವರ ಬಳಿ ಹೆಚ್ಚಿನ ಹಣ ಕೊಟ್ಟು ಮಕ್ಕಳು ಓದುವ ಪರಿಸ್ಥಿತಿ ಇದೆ ಎಂದು ಹೇಳಿದರಲ್ಲದೇ ತಮ್ಮ ಆರೋಪ ಯಾವುದೇ ವ್ಯಕ್ತಿ ಪರ, ವಿರುದ್ಧವಲ್ಲ ಎಂದು ಹೇಳಿದರು.

ಅಲ್ಪಸಂಖ್ಯಾತ,ಹಜ್ ಹಾಗೂ ವಕ್ಭ್ ಸಚಿವ ಜಮೀರ್‌  ಅವರಿಗೆ ಸಂಸ್ಥೆಯ ಅವ್ಯವಹಾರಗಳು ಕುರಿತು ಸಮಗ್ರ ಮಾಹಿತಿ ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅಂಜುಮನ್ ಹಿತರಕ್ಷಣಾ ವೇದಿಕೆ ಮುಖಂಡ ಮಹೆಬೂಬ ಹಡಲಗೇರಿ ಆರೋಪಿಸಿದರು.

 ವಕೀಲ ಶಬ್ಬೀರ ಬಾಗಲಕೋಟ ಮಾತನಾಡಿ, ಅಂಜುಮನ್ ಸಂಸ್ಥೆಯ ಲೆಕ್ಕಪತ್ರಗಳನ್ನು ಸರಿಯಾಗಿ ಇಡದ ಕಾರಣ ತೆರಿಗೆ ಇಲಾಖೆಯಿಂದ ₹ 42 ಲಕ್ಷ ದಂಡ ಹಾಕಲಾಗಿದೆ.  2019-20ರಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ₹ 50 ಲಕ್ಷ ಮಂಜೂರಾತಿ ದೊರೆತಿದ್ದು ಅದರಲ್ಲಿ ಒಂದನೇ ಕಂತಾಗಿ ₹ 25 ಲಕ್ಷ ಬಿಡುಗಡೆ ಆಗಿತ್ತು. ಅದರಲ್ಲಿ ₹ 12,33,880 ಬಳಕೆ ಮಾಡಿಕೊಂಡಿದ್ದು ಬಾಕಿ ಉಳಿದ ಹಣ  ದುರ್ಬಳಕೆಯಾಗಿದೆ ಎಂದು ದೂರಿದರು.

ಮಹೆಬೂಬ ನಗರದ ನಿವಾಸಿ ಮಹ್ಮದ ನಾಗರಾಳ, ವಕೀಲ ಎಂ.ಎ.ಲಿಂಗಸೂರು ಮಾತನಾಡಿದರು.  ಸುದ್ದಿಗೋಷ್ಠಿಯಲ್ಲಿ ಅಂಜುಮನ್ ಹಿತರಕ್ಷಣಾ ವೇದಿಕೆ ಮುಖಂಡರಾದ ಯಾಸೀನ ಸೋಠೆ, ವಕೀಲ ಎಂ.ಸಿ.ಮ್ಯಾಗೇರಿ, ಹುಸೇನಭಾಷಾ ಹುಣಚಗಿ, ಅಲ್ಲಾಭಕ್ಷö್ಯ ಶಿರೋಳ,ಅಬ್ದುಲಮಜೀದ ಶಿರೋಳ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.