ವಿಜಯಪುರ: ದೆಹಲಿಯ ವಿಕಾಸ್ ಪುರಿ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಬಿಜೆಪಿ ಯುವ ಮೋರ್ಚಾದ ಗೂಂಡಾಗಳು ಹಲ್ಲೆ ನಡೆಸಿರುವುದನ್ನು ನಾಗರಿಕ ಸಮಾಜ ಸಹಿಸಲು ಸಾಧ್ಯವಿಲ್ಲ. ಇದು ಅತ್ಯಂತ ಖಂಡನೀಯ ಎಂದು ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಭೋಗೇಶ್ ಸೋಲಾಪುರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಬಿಜೆಪಿ ಗೂಂಡಾ ನಾಯಕರುಗಳು ತಮ್ಮ ಹತಾಶೆಯಿಂದ ಈ ರೀತಿಯ ದಾಳಿಗಳಿಗೆ ಕೈ ಹಾಕಿದ್ದಾರೆ. ಕೂಡಲೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ರಾಷ್ಟ್ರದ ಮುಂದೆ ಕ್ಷಮೆಯಾಚಿಸಬೇಕು. ತಮ್ಮ ರೌಡಿ ಪಡೆ ನಾಯಕರುಗಳನ್ನು ಹತೋಟಿಯಲ್ಲಿ ಇಡಬೇಕು ಎಂದು ಆಗ್ರಹಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಬಗ್ಗೆ ಬಿಜೆಪಿ ಮನಸ್ಸಿನಲ್ಲಿ ಯಾಕಿಷ್ಟು ದ್ವೇಷ? ದೆಹಲಿಯಲ್ಲಿ ಆದ ಜನಪರ ಕೆಲಸಗಳನ್ನು ನೀವು ಮಾಡಲು ಸಾಧ್ಯವಾಗಲಿಲ್ಲ. ನೀವು 3 ಬಾರಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸೋತಿದ್ದೀರಿ. ಆದ್ದರಿಂದ ಈಗ ನೀವು ಕೇಜ್ರಿವಾಲ್ ಅವರನ್ನು ತೊಡೆದುಹಾಕಲು ಈ ವಾಮ ಮಾರ್ಗವನ್ನು ಆರಿಸಿದ್ದೀರಿ’ ಎಂದು ಅವರು ಬಿಜೆಪಿಗರ ಮೇಲೆ ಹರಿಹಾಯ್ದಿದ್ದಾರೆ.
ಹಿಂಸಾತ್ಮಕವಾಗಿರುವುದು ಸೋಲಿನ ಸಂಕೇತವಾಗಿದೆ. ದಾಳಿಕೋರನ ಬೆಂಬಲಕ್ಕೆ ಬಿಜೆಪಿ ನಾಯಕರು ನಿಂತಿರುವ ರೀತಿ ನೋಡಿದರೆ ಈ ದಾಳಿಯಲ್ಲಿ ಬಿಜೆಪಿ ಕೈವಾಡವಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.