ವಿಜಯಪುರ: ಮುಂದಿನ ದಿನಗಳಲ್ಲಿ ತೃತೀಯ ಲಿಂಗಿಗಳ ಕುಂದು–ಕೊರತೆಗಳ ನಿವಾರಣೆಗೆ ವಿಶೇಷ ಗಮನ ನೀಡಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಹೊಸಮನಿ ತಿಳಿಸಿದರು.
ನಗರದ ಕಾಕಾ ಕಾರ್ಖಾನಿಸ್ ಮಂಗಲ ಕಾರ್ಯಾಲಯದಲ್ಲಿ ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣೆ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೃತೀಯ ಲಿಂಗಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕೂಡ ದೊರಕಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಮುದಾಯದವರಿಗೆ ಕಾನೂನಿನ ರೀತಿಯಲ್ಲಿ ದೊರೆಯಬೇಕಾದ ಎಲ್ಲ ತರಹದ ಸಹಾಯವನ್ನು ಮಾಡಲಾಗುವುದು ಹಾಗೂ ನ್ಯಾಯಾಂಗದ ವ್ಯವಸ್ಥೆ ಬಗ್ಗೆ ವಿಶ್ವಾಸ ಮೂಡುವಂತೆ ಸಹಾಯ ಮಾಡಲಾಗುವುದು ಎಂದು ಅವರು ತಿಳಿಸಿದರು.
ನವ ಸ್ಪೂರ್ತಿ ಲೈಂಗಿಕ, ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆಯ ಮಲ್ಲು ಕಂಬಾರ, ನಮ್ಮ ಸಮುದಾಯದ ಜನರಿಗೆ ಮನೆಗಳನ್ನು ಹಾಗೂ ಸರ್ಕಾರದಿಂದ ಕೊಡಲಾಗುವ ಎಲ್ಲ ರೀತಿಯ ಯೋಜನೆಗಳನ್ನು ನೀಡಬೇಕು ಎಂದು ತಿಳಿಸಿದರು.
ತೃತೀಯಲಿಂಗಿಗಳನ್ನು ಕೂಡ ಮಾನವೀಯತೆಯ ದೃಷ್ಟಿಯಲ್ಲಿ ಕಾಣಬೇಕು ಹಾಗೂ ಸರ್ಕಾರಿ ಕೆಲಸಗಳನ್ನು ನೀಡಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆಯ ಆಯುಕ್ತ ವಿಜಯ್ ಮೆಕ್ಕಳಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಜಿಲ್ಲಾ ಸಮಾಲೋಚಕಿ ಭಾರತಿ ಪಾಟೀಲ್, ಆರೋಗ್ಯ ಇಲಾಖೆಯ ಅಧಿಕಾರಿ ಧಾರವಾಡಕರ್, ಪ್ರೇಮ ಕುಚಬಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.