ವಿಜಯಪುರ: ‘ಬಹು ದಶಕಗಳ ನಂತರ ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರಪಂಚದ ಅತ್ಯಂತ ಶ್ರೇಷ್ಠ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರು ಸರ್ವಾಧ್ಯಕ್ಷತೆ ವಹಿಸಬೇಕು ಎಂಬ ಸದುದ್ದೇಶದಿಂದ ಕಸಾಪ ರಾಜ್ಯ ಘಟಕದ ಅಧ್ಯಕ್ಷರು ಹಾಗೂ 28 ಜಿಲ್ಲಾ ಘಟಕಗಳ ಅಧ್ಯಕ್ಷರು ಸೇರಿ ಒಮ್ಮತದಿಂದ ಆಯ್ಕೆ ಮಾಡಿದ್ದು, ಇದನ್ನು ಬಾನು ಮುಷ್ತಾಕ್ ಗೌರವಿಸಬೇಕು’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮನವಿ ಮಾಡಿದ್ದಾರೆ.
‘ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದನ್ನು ಮಹೇಶ ಜೋಶಿ ಅವರು ದೂರವಾಣಿ ಮೂಲಕ ಬಾನು ಅವರನ್ನು ಸಂಪರ್ಕಿಸಿದಾಗ ಸಂತೋಷದಿಂದ ಒಪ್ಪಿಕೊಂಡಿದ್ದರು. ಆದರೆ, ಇದೀಗ 45 ದಿನ ಬಿಟ್ಟು ನನ್ನ ತೀರ್ಮಾನ ತಿಳಿಸುತ್ತೇನೆ ಎಂದು ಮತ್ತು ನನ್ನ ಆಯ್ಕೆ ಅನಿವಾರ್ಯವೇ? ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಹೇಳಿಕೆ ನೀಡಿರುವುದು ಅವರಿಗೆ ಭೂಷಣವಲ್ಲ’ ಎಂದು ತಿಳಿಸಿದ್ದಾರೆ.
‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆ ಮತ್ತು ಬೂಕರ್ ಪ್ರಶಸ್ತಿ ಪುರಸ್ಕೃತರಾದ ತಮಗೆ ಕಾರ್ಯಕಾರಿಣಿ ಸಮಿತಿ ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಿರುತ್ತದೆ. ಮೈಸೂರಿನಲ್ಲಿ ನೀಡಿದ ತಮ್ಮ ಅನುಮಾನದ ಹೇಳಿಕೆ ಸಲ್ಲದು’ ಎಂದು ಹೇಳಿದ್ದಾರೆ.
‘ಬಳ್ಳಾರಿಯಲ್ಲಿ ನಡೆಯಲಿರುವ ಸಮ್ಮೇಳನದ ದಿಕ್ಕು ತಪ್ಪಿಸುವ ಕಾರ್ಯಕ್ಕೆ ಹಲವು ವಿಕೃತ ಮನಸ್ಸುಗಳು ಸಂಚು ರೂಪಿಸುತ್ತಿದ್ದು, ಅದಕ್ಕೆ ತಾವು ಬಲಿಯಾಗಬಾರದು, ತಮಗೆ ಸಿಕ್ಕಿರುವ ಅವಕಾಶವನ್ನು ಬೇರೆಯವರು ಪಡೆಯಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಪರಿಷತ್ತಿನ ತನಿಖೆಗೂ ಸರ್ವಾಧ್ಯಕ್ಷರ ಹುದ್ದೆಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ತಾವು ಅರಿತುಕೊಳ್ಳಬೇಕು’ ಎಂದು ತಿಳಿಸಿದ್ದಾರೆ.
‘ಸಾಹಿತ್ಯ ಪರಿಷತ್ತಿನ ಲೋಪದೋಷಗಳು, ಸಮ್ಮೇಳನದ ಲೆಕ್ಕಾಚಾರ ಸರ್ವಾಧ್ಯಕ್ಷರಿಗೆ ಸಂಬಂಧಿಸಿದ ವಿಚಾರವಲ್ಲ. ಕಸಾಪ ಅಧ್ಯಕ್ಷರ ನಡಾವಳಿಕೆ ಕುರಿತು ಅನುಮಾನ ವ್ಯಕ್ತಪಡಿಸಿರುವ ಸಂಗತಿ ತಮಗೆ ಭೂಷಣವಲ್ಲ, ಜೋಶಿ ಅವರು ಪ್ರತಿ ತಿಂಗಳೂ ತಮ್ಮ ವೇತನವನ್ನು ಸಹ ತೆಗೆದುಕೊಳ್ಳದೇ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.
‘ರಾಜೀನಾಮೆ ನೀಡಿರುವ ಕೇಂದ್ರ ಪರಿಷತ್ತಿನ ಪದಾಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ, ಹತಾಶರಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪ್ರಾಮಾಣಿಕರಾಗಿದ್ದರೆ ಕಾರ್ಯಕಾರಿ ಸಮಿತಿಯಲ್ಲಿ ತಮ್ಮ ಅಭಿಪ್ರಾಯವನ್ನು ಎಲ್ಲರಿಗೂ ತಿಳಿಸಬಹುದಾಗಿತ್ತು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.