
ಹೊರ್ತಿ: ಮನುಷ್ಯನಿಗೆ ಸುಂದರ ಬದುಕಿನ ದಾರಿ ತೋರಿದ ಮಹಾನ್ ಸಂತ ಸಿದ್ಧೇಶ್ವರ ಸ್ವಾಮೀಜಿಯವರ ಜೀವನ, ವಿಚಾರಗಳು ನಮ್ಮೆಲ್ಲರ ಜೀವನಕ್ಕೆ ಆದರ್ಶಪ್ರಾಯವಾಗಿವೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.
ಹೊರ್ತಿಯ ರೇವಣಸಿದ್ಧೇಶ್ವರ ಹೊಸ ದೇವಸ್ಥಾನದ ಮುಂದೆ ಹೊರ್ತಿ ಗ್ರಾಮದ ಆಧ್ಯಾತ್ಮ ಸೇವಾ ಸಮಿತಿ ವತಿಯಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ನುಡಿ ನಮನ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಿದ್ಧೇಶ್ವರ ಸ್ವಾಮೀಜಿಯವರು ರೈತರಿಗೆ ಪ್ರಾಧಾನ್ಯತೆ ನೀಡಿದ್ದರು. ಗಡಿಕಾಯುವ ಸೈನಿಕರಿಗೆ ಮತ್ತು ಶಿಕ್ಷಕ-ಗುರುವಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಈ ಮೂವರ ಸೇವೆಯ ಕೊಡುಗೆ ದೊಡ್ಡದು, ನೀರನ್ನು ಹಿತ-ಮಿತವಾಗಿ ಬಳಸಬೇಕು. ನಿಸರ್ಗದ ಕೊಡುಗೆ ಅವುಗಳ ರಕ್ಷಣೆ ಉಳಿಸಿ ಬೆಳೆಸುವ ಮಹತ್ವ ನೀಡಿದ್ದರು ಎಂದು ಅವರು ಆಶೀರ್ವಚನದಲ್ಲಿ ಹೇಳಿದರು.
ಹೊರ್ತಿ ಶಾಂತೇಶ್ವರ ಸಹಕಾರ ಸಂಘದ ಅಧ್ಯಕ್ಷ ಶ್ರೀಮಂತ ಇಂಡಿ ಪ್ರಾಸ್ತಾವಿಕವಾಗಿ ಮಾತನಾಡಿ,' ಇದೇ ವಿಜಯಪುರ ಜ್ಞಾನ ಯೋಗಾಶ್ರಮದಲ್ಲಿ ಡಿ, 29ರಿಂದ ಜನವರಿ 2ರಂದು ಸಿದ್ದೇಶ್ವರ ಸ್ವಾಮೀಜಿ ನುಡಿನಮನ ಮಹೋತ್ಸವದ ಪ್ರಯುಕ್ತ ಜರುಗುವ ವಿವಿಧ ಕಾರ್ಯಕ್ರಮದಲ್ಲಿ ಗ್ರಾಮ ಹಾಗೂ ಸುತ್ತಲಿನ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ವೇದಿಕೆ ಮೇಲಿದ್ದ ಜ್ಞಾನಾನಂದ ಸ್ವಾಮೀಜಿ ಹಾಗೂ ಬಸವ ಪ್ರಸಾದ ಸ್ವಾಮೀಜಿ ಮತ್ತು ಶೃದ್ಧಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಈ ನುಡಿ ನಮನ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊರ್ತಿ ಪಿಕೆಪಿಎಸ್ ಅಧ್ಯಕ್ಷ ಮಹಾದೇವ ಪೂಜಾರಿ ವಹಿಸಿದ್ದರು.
ಕಾರ್ಯಕ್ರಮದ ಮುನ್ನ ಹೊರ್ತಿಯ ಶ್ರೀ ರೇವಣಸಿದ್ಧೇಶ್ವರ ಹಳೆ ಗುಡಿಯಿಂದ ಅಲಂಕೃತ ಜೀಪ್ ನ ರಥದಲ್ಲಿ ಶ್ರೀಸಿದ್ಧೇಶ್ವರ ಶ್ರೀಗಳ ಚಿತ್ರ ಇಟ್ಟು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿಯ ಮೆರವಣಿಗೆ ನಡೆಸಲಾಯಿತು.
ಹೊರ್ತಿ ಶಾಂತೇಶ್ವರ ಸಹಕಾರ ಸಂಘದ ಅಧ್ಯಕ್ಷ ಶ್ರೀಮಂತ ಇಂಡಿ, ನಿವೃತ್ತ ಶಿಕ್ಷಕ ಬಿ ಬಿ. ಗಡ್ಡದ, ಹೊರ್ತಿ ಪಿಕೆಪಿಎಸ್ ಸಿಇಒ ಅಣ್ಣು ಪೂಜಾರಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಶ್ರೀ ಭೋಸಗಿ, ಗುರಣಗೌಡ ಪಾಟೀಲ, ಸರ್ವೋದಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ರೇವಣಸಿದ್ಧ ಪೂಜಾರಿ, ಎಸ್ ಎಸ್.ಬೋರ್ಗಿ, ಸಚಿನ್ ಅಂಕಲಗಿ ಹಾಗೂ ನೂರಾರು ಭಕ್ತರು ಗುರು ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.