ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ (ಮೂಲನಂದೀಶ್ವರ) ಜಾತ್ರೆ ಅಂಗವಾಗಿ ದಾಸೋಹಕ್ಕೆ ಮಹಿಳೆಯರು ಮನೆಯಲ್ಲಿ ಮಾಡಿದ ರೊಟ್ಟಿಗಳ ಬುಟ್ಟಿಗಳನ್ನು ಶನಿವಾರ ಸಂಜೆ ಮೆರವಣಿಗೆ ಮೂಲಕ ದೇವಸ್ಥಾನದ ದಾಸೋಹ ಭವನಕ್ಕೆ ತಲುಪಿಸಿದರು.
ಸ್ಥಳೀಯ ವಿರಕ್ತಮಠದಲ್ಲಿ ಬಸವಣ್ಣನವರ ಭಾವಚಿತ್ರ ಹಾಗೂ ರೊಟ್ಟಿಯ ಬುಟ್ಟಿಗಳಿಗೆ ಸಿದ್ಧಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮಹಿಳೆಯರು ರೊಟ್ಟಿ ಬುಟ್ಟಿಯನ್ನು ತಲೆಮೇಲೆ ಹೊತ್ತುಕೊಂಡು ಬಸವ ಜನ್ಮಸ್ಮಾರಕ, ಪಲ್ಲೇದ ಕಟ್ಟಿ, ಅಗಸಿ, ಬಸವೇಶ್ವರ ವೃತ್ತದ ಮಾರ್ಗವಾಗಿ ದೇವಸ್ಥಾನಕ್ಕೆ ತೆರಳಿ ತಾವು ತಂದಿದ್ದ ಸಾವಿರಾರು ರೊಟ್ಟಿಗಳನ್ನು ದಾಸೋಹ ಭವನಕ್ಕೆ ತಲುಪಿಸಿದರು.
‘ಜಾತ್ರೆಗೆ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಜಾತ್ರೆ ವೇಳೆ ನಿರಂತರ ದಾಸೋಹ ಸೇವೆ ನಡೆಯುತ್ತದೆ. ಪಟ್ಟಣದ ವಿವಿಧ ಬಡಾವಣೆಗಳ ಮಹಿಳೆಯರು ತಮ್ಮ ಮನೆಯಲ್ಲಿ ಮಾಡಿದ ರೊಟ್ಟಿಗಳನ್ನು ದಾಸೋಹಕ್ಕೆ ನೀಡುತ್ತಿರುವುದು ವಿಶೇಷ. ಇಂತಹ ಕಾರ್ಯಗಳು ಇತರರಿಗೆ ಮಾದರಿಯಾಗಲಿದೆ. ಜಾತ್ರೆಯ ಮೆರುಗನ್ನು ಹೆಚ್ಚಿಸಲಿದೆ’ ಎಂದು ಸಿದ್ದಲಿಂಗ ಶ್ರೀ ತಿಳಿಸಿದರು.
ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ, ಹಿರಿಯರಾದ ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಶೇಖರ ಗೊಳಸಂಗಿ, ಎಂ.ಜಿ.ಆದಿಗೊಂಡ, ಮುಖಂಡರಾದ ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ, ಬಾಬುಗೌಡ ಪಾಟೀಲ, ಶ್ರೀಕಾಂತ ಪಟ್ಡಣಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.