ವಿಜಯಪುರ: ಬೆನಕನಹಳ್ಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶಿವಯೋಗೀಶ್ವರ ಮಹಾಸ್ವಾಮಿಗಳ ಯೋಗಾನುಷ್ಟಾನದ ಸುವರ್ಣ ಮಹೋತ್ಸವದ ಅಂಗವಾಗಿ ಏಪ್ರಿಲ್ 21 ಮತ್ತು 22ರಂದು 18 ಕೋಟಿ ಜಪ ಯಜ್ಞ ಹಮ್ಮಿಕೊಳ್ಳಲಾಗಿದೆ ಎಂದುಅಡವಿಲಿಂಗ ಮಹಾರಾಜರು ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಜಂಬಗಿ (ಆ) ಗ್ರಾಮದವರಾದ ಶಿವಯೋಗೀಶ್ವರರು 1968 ಅ.10 ರಿಂದ 1970 ಏ.23ರವರೆಗೆ ಯೋಗಾನುಷ್ಟಾನಕ್ಕೆ ಕುಳಿತಿದ್ದರು. ಬಂಥನಾಳದ ಸಂಗನಬಸವ ಶ್ರೀಗಳು ಹಾಗೂ ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಶ್ರೀಗಳು ಬಂದು ಬೃಹತ್ ಕಾರ್ಯಕ್ರಮ ನೆರವೇರಿಸಿ ಅನುಷ್ಟಾನಕ್ಕೆ ಮಂಗಲ ಕೋರಿದ್ದರು. ಇದೀಗ ಆ ಸುವರ್ಣ ಘಳಿಗೆಗೆ 52 ವರ್ಷ ತುಂಬಿದ ಕಾರಣ ಜಪ ಯಜ್ಞ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾರ, ಕಲಬುರ್ಗಿ ಜಿಲ್ಲೆಯ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅವರಿಗೆ ಊಟೋಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.
ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಮಾತನಾಡಿ, ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಭವ್ಯ ಮಂಟಪ ನಿರ್ಮಿಸಲಾಗುತ್ತಿದ್ದು, ಲಕ್ಷಾಂತರ ಜನ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ನಾಡಿನ ನಾನಾ ಭಾಗಗಳಿಂದ ಪೂಜ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಈ ಧರ್ಮ ಸಭೆಯಲ್ಲಿ ಸರ್ವರೂ ಪಾಲ್ಗೊಳ್ಳಬೇಕು. ಕಾರ್ಯಕ್ರಮ ಯಶಸ್ಸಿಗೆ ತನು ಮನ ಧನದಿಂದ ಸಹಾಯ ಮಾಡಬೇಕು ಎಂದು ಹೇಳಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿಯೇ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಇಂಥ ಕಾರ್ಯಕ್ರಮವನ್ನು ಎಲ್ಲರೂ ಸಾಕ್ಷೀಕರಿಸಬೇಕೆಂದರು.
ಕೊಲ್ಹಾರದ ಕಲ್ಲಿನಾಥ ಸ್ವಾಮೀಜಿ, ಮುಖಂಡ ಶೀಲವಂತ ಉಮರಾಣಿ, ವಿಜಯಕುಮಾರ ಜೋಶಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.