ವಿಜಯಪುರ: ಸರ್ಕಾರಿ ವಲಯದಲ್ಲಿ ಖಾಸಗಿಕರಣ ನಿಷೇಧ, ಎಸ್ಸಿ, ಎಸ್ಟಿ ಮತ್ತು ಒಬಿಸಿ, ಅಲ್ಪಸಂಖ್ಯಾತರಿಗೆ ಖಾಸಗಿ ವಲಯದಲ್ಲಿ ಮೀಸಲಾತಿಗೆ ಆಗ್ರಹಿಸಿ ಭೀಮ್ ಆರ್ಮಿಯಿಂದ ಪ್ರತಿಭಟನೆ ನಡೆಸಲಾಯಿತು.
ಆರ್ಮಿಯ ಉತ್ತರ ಕರ್ನಾಟಕ ಅಧ್ಯಕ್ಷ ಮತೀನಕುಮಾರ ಮಾತನಾಡಿ, ಎಲ್ಲ ನಾಗರಿಕರಿಗೆ ಭಾರತೀಯ ಸಂವಿಧಾನ ಸಮಾನ ಹಕ್ಕುಗಳನ್ನು ನೀಡಲಾಗಿದೆ. ಹಾಗೆಯೇ ಶತಮಾನಗಳಿಂದ ಸಾಮಾಜಿಕ ತುಳಿತಕ್ಕೆ ಮತ್ತು ಶೋಷಣೆಗೆ ಬಲಿಯಾಗಿರುವ ವಂಚಿತ ಸಮುದಾಯಗಳನ್ನು ರಾಷ್ಟ್ರದ ಅಭಿವೃದ್ಧಿಯ ಮುಖ್ಯ ವಾಹಿನಿಯೊಂದಿಗೆ ಸಂಪರ್ಕಿಸಲು ಮೀಸಲಾತಿ ನೀಡಲಾಗಿದೆ ಎಂದರು.
ಆದರೆ, ಸರ್ಕಾರ ಮತ್ತು ಖಾಸಗಿ ವಲಯಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಪ್ರಾತಿನಿಧ್ಯ ತಪ್ಪಿಸುವ ಹುನ್ನಾರ ನಡೆದಿದೆ. ಕೇಂದ್ರ ಸರ್ಕಾರವು ಕಲ್ಯಾಣ ರಾಷ್ಟ್ರದ ಪರಿಕಲ್ಪನೆ ಬಿಟ್ಟು ಜಾತಿವಾದ ಮತ್ತು ಬಂಡವಾಳ ಶಾಹಿ ವ್ಯವಸ್ಥೆಯನ್ನು ದೇಶದ ಮೇಲೆ ಹೇರುತ್ತಿದೆ. ದೇಶದ ದುರ್ಬಲರು, ಶೋಷಿತರು, ವಂಚಿತ ವರ್ಗದ ಜನರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರವು ಕೈಗಾರಿಕೊದ್ಯೋಮಿಗಳ ಕೈಗೊಂಬೆಯಾಗಿ, ರೈಲ್ವೆ, ಬ್ಯಾಂಕ್, ಎಲ್ಐಸಿ, ಒಎನ್ಜಿಸಿ, ಮತ್ತು ಇತರೆ ಎಲ್ಲ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಬಂಡವಾಳಶಾಹಿಗಳಿಗೆ ತಲೆಬಾಗಿ ನಿಂತಿದೆ ಎಂದರು.
ಖಾಸಗೀಕರಣ ಪ್ರತಿಕ್ರಿಯೆ ಇದೇ ರೀತಿ ಮುಂದುವರಿದರೆ ಆಡಳಿತ ಮತ್ತು ಇತರೆ ಕ್ಷೇತ್ರಗಳಲ್ಲಿ ಹಿಂದುಳಿದ ಸಮುದಾಯದ ಭಾಗವಹಿಸುವಿಕೆಯೂ ಶೂನ್ಯಕ್ಕೆ ಇಳಿಯುವ ದಿನ ದೂರವಿಲ್ಲ ಎಂದು ತಿಳಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷಮಲ್ಲು ಜಾಲಗೇರಿ, ಜಿಲ್ಲಾ ಉಪಾಧ್ಯಕ್ಷ ರಿಜ್ವಾಲ್ ಮುಲ್ಲಾ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಿರ್ಮಲಾ ಹೊಸಮನಿ, ಹಮೀದಾ ಪಟೇಲ, ನಗರ ಅಧ್ಯಕ್ಷ ಪರಶುರಾಮ ಚಲವಾದಿ, ಸುಖದೇವ ಚಲವಾದಿ, ಕಾಶಿನಾಥ ದೊಡ್ಡಮನಿ, ಉತ್ತಮ ಕಟ್ಟಿಮನಿ, ಸಾಗರ ತೋಳೆ, ನಾಗರಾಜ ತೋಳೆ ಹಾಗೂ ಭೀಮ್ ಆರ್ಮಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.