ವಿಜಯಪುರ: ‘ಆರ್ಎಸ್ಎಸ್ನವರು ಭಾರತದ ನಿಜವಾದ ತಾಲಿಬಾನಿಗಳು’ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ಅಸಂಬದ್ಧ ಹೇಳಿಕೆ ಖಂಡಿಸಿ ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಕಾಂಗ್ರೆಸ್ ಕಚೇರಿ ಬಳಿ ತೆರಳಲು ಯತ್ನಿಸಿದ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.
ಪ್ರತಿಭಟನೆ ವೇಳೆ ಮಾತನಾಡಿದಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಪದೇ ಪದೇ ತಾಲಿಬಾನಿಗಳಿಗೆ ಬೆಂಬಲಿಸುತ್ತಿರುವ ಕಾಂಗ್ರೆಸಿಗರು ಬಿಜೆಪಿ ಮತ್ತು ಆರ್ಎಸ್ಎಸ್ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದರು.
ಸಾಕಷ್ಟು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹಾಗೂ ದೇಶವಿರೋಧಿ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಪಕ್ಷ ಇನ್ನು 15 ವರ್ಷಗಳಲ್ಲಿ ದೇಶದಲ್ಲಿ ನಾಮಾವಶೇಷವಾಗಲಿದೆ ಎಂದರು.
ಪ್ರವಾಹ ಪರಿಸ್ಥಿತಿ, ಕೊರೊನಾ ಸಂಕಷ್ಟ, ಯುದ್ಧದಂತಹ ಉದ್ವಿಘ್ನ ಪರಿಸ್ಥಿತಿಯಲ್ಲಿ ದೇಶದ ಜನರ ಸೇವೆಗೆ ತೆರಳುವ ಆರ್ಎಸ್ಎಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ. ದೇಶದ ಜನ ಬರುವ ದಿನದಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸದ್ದಾರೆ ಎಂದು ಹೇಳಿದರು.
ಪ್ರಚಾರದ ಗುಂಗಲ್ಲಿ ಧ್ರುವ ನಾರಾಯಣ ಅವರು ಆರ್ಎಸ್ಎಸ್, ಬಿಜೆಪಿ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗಬಹುದೆಂಬ ಹುಚ್ಚಿನಿಂದ ನೀಡಿದ ಹೇಳಿಕೆ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಶಿಂಧೆ, ಯುವ ಮೋರ್ಚಾ ಪ್ರಭಾರಿ ರಾಜೇಶ ತವಸೆ, ನಾಗಠಾಣ ಯುವ ಮೋರ್ಚಾ ಮಂಡಲ ಅಧ್ಯಕ್ಷ ರವಿ ಬಿರಾದಾರ, ವಿಜಯಪುರ ನಗರ ಪ್ರಧಾನ ಕಾರ್ಯದರ್ಶಿ ಪ್ರವೀಣ ಕೂಡಗಿ, ಅನೀಲ ಉಪ್ಪಾರ, ಆದಿತ್ಯ ತಾವರಗೇರಿ, ವಿಠ್ಠಲ ನಡುವಿನಕೇರಿ, ಮಲ್ಲು ಕಲಾದಗಿ, ಪಾಪುಸಿಂಗ್ ರಜಪೂತ, ಪರಶುರಾಮ ಹೊಸಪೇಠ, ಪ್ರೇಮನಾಥ ಬಿರಾದಾರ, ರಾಜಕುಮಾರ ಗೌಂಡಿ, ದಿನೇಶಗೌಡ ಪಾಟೀಲ, ಮಂಜು ಕಡಪಟ್ಟಿ, ಸಾಗರ ಕಾಪ್ಸೆ, ವಿಕಾಸ ಪದಕಿ, ಪ್ರಶಾಂತ ಪೂಜಾರಿ, ಪ್ರಶಾಂತ ಅಗಸರ, ಸತೀಶ ಅಗಸರ, ನಿಖಿಲ ಚೌಧರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.